ಅಂಕೋಲಾ: ಮತ್ಸ್ಯಕ್ಷಾಮದಿಂದಾಗಿ ಕಡಲ ತೀರ ಅವಲಂಬಿಸಿ ಸಾಂಪ್ರದಾಯಿಕ ಮೀನುಗಾರಿಕೆಯಿಂದ ಬದುಕು ಕಟ್ಟಿಕೊಂಡಿರುವ ಮೀನುಗಾರರು ಅತಂತ್ರರಾಗಿದ್ದಾರೆ. ಇದಕ್ಕ ಕೇಂದ್ರ ಸರ್ಕಾರ ಅಸಾಂಪ್ರದಾಯಿಕ ಮೀನುಗಾರಿಕೆಗೆ ಅನುಮತಿ ನೀಡಿರುವುದೇ ಕಾರಣ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮುಖ್ಯವಾಗಿ ಪಶ್ಚಿಮ ಕರಾವಳಿಯಲ್ಲಿ ಮತ್ಸ್ಯಕ್ಷಾಮ ಉಂಟಾಗಿದೆ. ಕೇಂದ್ರ ಸರ್ಕಾರ ಅಸಾಂಪ್ರದಾಯಿಕ ವಿಧಾನಗಳ ಮೂಲಕ ಮೀನುಗಾರಿಕೆ ನಡೆಸಲು ಭಾರೀ ಗಾತ್ರದ ಯಾಂತ್ರಿಕ ದೋಣಿಗಳಿಗೆ 2017ರ ಮಾರ್ಚ್ ತಿಂಗಳವರೆಗೆ ಅವಕಾಶ ನೀಡಿರುವುದು ಸಮಸ್ಯೆಯನ್ನು ಮತ್ತಷ್ಟು ಉಲ್ಭಣಗೊಳಿಸಿದೆ.
‘ಆಳ ಸಮುದ್ರದಲ್ಲಿ ರಾತ್ರಿ ವೇಳೆ ಹೈವೊಲ್ಟೇಜ್ ಜನರೇಟರ್ ಮೂಲಕ ಎಲ್.ಇ.ಡಿ. ಬಲ್ಬ್ ಉರಿಸಿ ಮೀನುಗಳನ್ನು ಬೆಳಕಿನ ಕಡೆಗೆ ಆಕರ್ಷಿಸಲಾಗುತ್ತದೆ. ತಂಡೋಪ ತಂಡವಾಗಿ ಬೆಳಕಿನ ಸುತ್ತ ಸುಳಿಯುವ ಮೀನುಗಳಿಗೆ ಬಲೆ ಬೀಸಿ ಹಿಡಿಯಲಾಗುತ್ತದೆ. ಇದು ಅಪಾಯಕಾರಿ ಅಸಾಂಪ್ರದಾಯಿಕ ಮೀನುಗಾರಿಕೆಯಾಗಿದೆ. ಇದರಿಂದ ಮತ್ಸ್ಯ ಸಂತತಿ ನಾಶವಾಗುತ್ತದೆ. ಇದೇ ರೀತಿ ಪಶ್ಚಿಮ ಕರಾವಳಿಯಲ್ಲಿನ ಅಪರೂಪದ ಮೀನಿನ ತಳಿಯಾಗಿರುವ ನುಚ್ಗೆ ಜಾತಿಯ ಮೀನುಗಳನ್ನು ಅಸಾಂಪ್ರದಾಯಿಕ ಮೀನುಗಾರಿಕೆ ನಡೆಸುವವರು ಮೋಸದ ತಂತ್ರ ಬಳಸಿ ಹಿಡಿಯುತ್ತಿರುವುದು ಅವರ ಧನದಾಹಕ್ಕೆ ಸಾಕ್ಷಿಯಾಗಿದೆ’ ಎಂದು ಸಾಗರ ಜೀವ ವಿಜ್ಞಾನಿ ಡಾ. ವಿ.ಎನ್. ನಾಯಕ ತಿಳಿಸಿದ್ದಾರೆ.
‘ವೈಜ್ಞಾನಿಕವಾಗಿ ಸ್ಕ್ವಿಡ್ ಗುಂಪಿಗೆ ಸೇರಿದ ಈ ಮೀನುಗಳು ನವೆಂಬರ್ನಿಂದ ಫೆಬ್ರವರಿ ತಿಂಗಳ ಅವಧಿಯಲ್ಲಿ ಸಂತಾನೋತ್ಪತ್ತಿ ಪ್ರಾರಂಭಿಸುತ್ತವೆ. ಆದರೆ ಈ ಮೀನುಗಳು ದ್ರಾಕ್ಷಿ ಗೊಂಚಲು ಆಕೃತಿಯಲ್ಲಿ ಮೊಟ್ಟೆ ಇಡಲು ಆಧಾರ ಅಗತ್ಯವಿರುತ್ತದೆ. ಅಸಾಂಪ್ರದಾಯಿಕ ಮೀನುಗಾರಿಕೆ ನಡೆಸುವವರು ಗಾಳಿ ಮರದ ಟೊಂಗೆಗಳನ್ನು ಸಮುದ್ರದಲ್ಲಿ ಹಾಕಿ ಅಲ್ಲಿ ಮೊಟ್ಟೆ ಇಡಲು ಬರುವ ನುಚ್ಗೆ ಮೀನುಗಳನ್ನು ಬಲೆ ಬೀಸಿ ಹಿಡಿಯುತ್ತಾರೆ. ಈ ಮೀನುಗಳಿಗೆ ಹೆಚ್ಚಿನ ಬೆಲೆ ಇರುವುದರಿಂದ ಈ ತಂತ್ರವನ್ನು ಬಳಸಲಾಗುತ್ತದೆ. ಇದರಿಂದಾಗಿ ಮತ್ಸ್ಯ ಸಂತತಿಗೆ ವಿನಾಶದ ಅಂಚಿಗೆ ತಲುಪಿದೆ. ಕಿಂಗ್ಫಿಶ್ ಎನ್ನಲಾಗುವ ಈಶೋಣ ಮೀನಿನ ಸಂತತಿ ಸಹ ಕ್ಷೀಣವಾಗಿದೆ’ ಎಂದು ನಾಯಕ ತಿಳಿಸಿದರು.
ಈ ಅಸಾಂಪ್ರದಾಯಿಕ ಮೀನುಗಾರಿಕೆಯ ಸಾಧಕ–ಬಾಧಕ ಚರ್ಚಿಸಲು ಸರ್ಕಾರ ಬೆಂಗಳೂರಿನಲ್ಲಿ ಕಳೆದ, ಡಿಸೆಂಬರ್ 20ರಂದು ಅಧಿಕಾರಿಗಳು ಮತ್ತು ಮೀನುಗಾರರ ಸಭೆ ಆಯೋಜಿಸಿದ್ದಿತು. ಆದರೆ ಈ ಸಭೆಯಲ್ಲಿ ಸಾಂಪ್ರದಾಯಿಕ ಮೀನುಗಾರರ ಸಂಘಟನೆ ಭಾಗವಹಿಸಿಲ್ಲ. ಅಸಾಂಪ್ರದಾಯಿಕ ಮೀನುಗಾರಿಕೆ ನೆರೆಯ ಮಹಾರಾಷ್ಟ್ರ, ಕೇರಳ, ಗೋವಾ ರಾಜ್ಯಗಳಲ್ಲೂ ಚಾಲ್ತಿಯಲ್ಲಿದೆ. ಇದೀಗ ಕೇಂದ್ರ ಸರ್ಕಾರ ಮಾರ್ಚ ಅಂತ್ಯದವರೆಗೆ ಇದಕ್ಕೆ ಅನುಮತಿ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
-ಸಿದ್ಧಲಿಂಗಸ್ವಾಮಿ ವಸ್ತ್ರದ