ಹುಬ್ಬಳ್ಳಿ: ‘ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಅವಳಿ ನಗರದ ಶಾಲಾ–ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗುವುದು. ವಿದ್ಯಾರ್ಥಿಗಳು ತಮ್ಮ ಕುಟುಂಬದವರಿಗೆ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಬೇಕು’ ಎಂದು ಪೊಲೀಸ್ ಕಮಿಷನರ್ ಪಾಂಡುರಂಗ ರಾಣೆ ಇಲ್ಲಿ ಸಲಹೆ ನೀಡಿದರು.
ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್ ವತಿಯಿಂದ ನಗರದ ಚೆನ್ನಮ್ಮ ವೃತ್ತದ ಬಳಿ ಬುಧವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
‘ರಸ್ತೆಯಲ್ಲಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಬೇಕು. ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದರಿಂದ ಇತರರ ಜೀವಕ್ಕೆ ಸಂಚಕಾರ ಬರುತ್ತದೆ ಎಂಬ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು’ ಎಂದು ಹೇಳಿದರು.
‘ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಎಲ್ಲ ಶಾಲಾ–ಕಾಲೇಜುಗಳಿಗೆ ಭೇಟಿ ನೀಡಿ, ಸುರಕ್ಷತೆಗೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರ, ಸಿ.ಡಿ.ಗಳನ್ನು ತೋರಿಸಿ ಅರಿವು ಮೂಡಿಸಲಾಗುವುದು. ರಸ್ತೆ ಸುರಕ್ಷತೆ ಬಗ್ಗೆ ಇತರರಲ್ಲೂ ಜಾಗೃತಿ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಚೆನ್ನಮ್ಮ ವೃತ್ತದಿಂದ ನೆಹರೂ ಮೈದಾನದವರೆಗೆ ಶಾಲಾ ಮಕ್ಕಳು ಜಾಥಾ ನಡೆಸಿದರು. ‘ಶಿರಸ್ತ್ರಾಣ ಧರಿಸಿ ವಾಹ ಚಲಾಯಿಸಿ’, ‘ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ’, ‘ಸಂಚಾರ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಿ’, ‘ಅಡ್ಡಾದಿಡ್ಡಿ ವಾಹನ ಚಾಲನೆ ಮಾಡುವುದು ಬೇಡ’ ಎಂಬಿತ್ಯಾದಿ ಜಾಗೃತಿ ಫಲಕಗಳು ಗಮನ ಸೆಳೆದವು.
ಡಿಸಿಪಿ (ಕಾನೂನು–ಸುವ್ಯವಸ್ಥೆ) ಜಿನೇಂದ್ರ ಖನಗಾವಿ, ಡಿಸಿಪಿ (ಅಪರಾಧ–ಸಂಚಾರ) ಮಲ್ಲಿಕಾರ್ಜುನ ಬಾಲದಂಡಿ, ಎಸಿಪಿ (ಸಂಚಾರ) ಎಸ್.ಬಿ. ಖವಾಸ್, ಎಸಿಪಿ (ಉತ್ತರ ವಿಭಾಗ) ಎಚ್.ಜಿ. ದಾವೂದ್ ಖಾನ್, ಇನ್ಸ್ಪೆಕ್ಟರ್ಗಳಾದ ಮುತ್ತಣ್ಣ ಪಿ. ಸರವಗೋಳ, ಹುಲ್ಲಣ್ಣವರ, ಶ್ಯಾಮರಾವ ಸಜ್ಜನ, ಕೆ. ಪುಟ್ಟಸ್ವಾಮಿ, ಶೇಖ್ ಅಲಿ ಇದ್ದರು.
***
ಜೀವ ಅಮೂಲ್ಯವಾದುದು. ಅದನ್ನು ರಕ್ಷಣೆ ಮಾಡಿಕೊಳ್ಳಬೇಕಾದುದು ಪ್ರತಿಯೊಬ್ಬರ ಕರ್ತವ್ಯ.
-ಪಾಂಡುರಂಗ ರಾಣೆ
ಪೊಲೀಸ್ ಕಮಿಷನರ್