ಉಡುಪಿ: ಅಪೌಷ್ಟಿಕತೆ ನಿವಾರಣೆ ಹಾಗೂ ಶಿಶು ಮರಣ ತಡೆಯಲು ಸರ್ಕಾರ ಹಲವು ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಪ್ರಾನ್ಸಿಸ್ ಹೇಳಿದರು.
ಮಣಿಪಾಲ್ ನರ್ಸಿಂಗ್ ಕಾಲೇಜು ಹಾಗೂ ಮಣಿಪಾಲ್ ವಿಶ್ವವಿದ್ಯಾಲಯದ ಸಂಯುಕ್ತವಾಗಿ ಟಿ.ಎಂ.ಎ. ಪೈ ಸಭಾಂಗ ಣದಲ್ಲಿ ಸೋಮವಾರ ಏರ್ಪಡಿಸಿದ್ದ ‘ಮಹಿಳೆ ಮತ್ತು ಮಕ್ಕಳ ಮೇಲೆ ಜಾಗತಿಕ ವಿದ್ಯಮಾನಗಳ ಪರಿಣಾಮ’ ವಿಷಯ ಕುರಿತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಸರಾಸರಿಗಿಂತ ಉಡುಪಿ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಇದೆ. ಸಮಗ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಯಲ್ಲಿ ಗರ್ಭಿಣಿ ಮಹಿಳೆಯರಿಗೆ ಸಹ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಸರ್ಕಾರವು ಜಾರಿಗೆ ತರುತ್ತಿರುವ ಹಲವಾರು ಯೋಜನೆಗಳು ಮಕ್ಕಳ ರಕ್ಷಣೆಗೆ ಇವೆ. ಅವುಗಳನ್ನು ಸಮರ್ಪ ಕವಾಗಿ ಜಾರಿಗೆ ತರಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಣಿಪಾಲ್ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಮಹಿಳೆಯರು ಹಲವಾರು ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತು ಸಾಧನೆ ಮಾಡುತ್ತಿದ್ದಾರೆ ಎಂದರು. ಆರೋಗ್ಯ, ಶಿಕ್ಷಣ ಹಾಗೂ ಅನಕ್ಷತೆಯನ್ನು ಹೋಗಲಾಡಿಸುವ ಬಗ್ಗೆ ಟಿಎಂಎ ಪೈ ಅವರಿಗೆ ಅಪಾರ ಕಾಳಜಿ ಇತ್ತು. ಅದೇ ಕಾರಣಕ್ಕೆ ಅವರು ಈ ದೊಡ್ಡ ಸಂಸ್ಥೆ ಕಟ್ಟಿ ಬೆಳೆಸಿದರು ಎಂದು ಅವರು ಹೇಳಿದರು.
ಕೆನಡಾದ ಮ್ಯಾಕ್ಮಾಸ್ಟರ್ ವಿಶ್ವವಿ ದ್ಯಾಲಯದ ಪ್ರಾಧ್ಯಾಪಕಿ ಡಾ. ಬಸಂತಿ ಮಜೂಂದಾರ್ ಅವರು ಸಮ್ಮೇಳನದ ಉದ್ದೇಶದ ಬಗ್ಗೆ ಮಾತನಾಡಿದರು. ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ನ ಡೀನ್ ಆ್ಯನ್ಸಿ ಜಾರ್ಜ್ ಸ್ವಾಗತಿಸಿದರು. ಸುಮಾರು 400 ಮಂದಿ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.
ಜಾಗತಿಕ ದುರಂತಗಳಿಂದ ಕಲಿತ ಪಾಠ, ಮಹಿಳೆ ಮತ್ತು ಮಕ್ಕಳ ಮೇಲೆ ಯುದ್ಧ, ಹಿಂಸೆ ಹಾಗೂ ಭಯೋತ್ಪಾದನೆ ಪರಿಣಾಮ ವಿಷಯ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾತನಾಡಿದರು.
***
ಮಹಿಳಾ ಸಬಲೀಕರಣದ ಜವಾಬ್ದಾರಿ ಪ್ರತಿಯೊಬ್ಬರು ತೆಗೆದುಕೊಳ್ಳಬೇಕು, ಮಹಿಳೆಯರು ಸಾಧನೆ ಮಾಡಲು ಪ್ರೋತ್ಸಾಹ ಅಗತ್ಯ.
-ಡಾ. ಎಚ್.ಎಸ್. ಬಲ್ಲಾಳ್, ಮಣಿಪಾಲ್ ವಿ.ವಿ. ಸಹ ಕುಲಾಧಿಪತಿ