ಸುರಪುರ: ‘ರಾಷ್ಟ್ರೀಯ ಮಾನ್ಯತೆ ಪಡೆದಿರುವ ದೇಶದ ಪ್ರತಿ ಭಾಷೆಗಳಲ್ಲಿ ಶೇ 50 ರಷ್ಟು ಗೊಂಡಿ ಭಾಷೆಯ ಮಿಶ್ರ ಣವಿದೆ. ಹಂಪಿಯ ಕೌಟಂಬಿ ದೇವಾ ಲಯ ಮತ್ತು ದರೋಜಿ ಕರಡಿ ಧಾಮದಲ್ಲಿ ಸಿಕ್ಕಿರುವ ಶಾಸನಗಳಲ್ಲಿ ಗೊಂಡಿ ಭಾಷೆಯ ಕುರಿತು ಉಲ್ಲೇಖ ವಿದೆ’ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಬುಡ್ಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಎಂ. ಮೇತ್ರಿ ವಿವರಿಸಿದರು.
ತಾಲ್ಲೂಕಿನ ತಿಂಥಣಿ ಗ್ರಾಮದ ಜೈವಿಕ ಇಂಧನ ಉದ್ಯಾನ ಕಟ್ಟಡದಲ್ಲಿ ಸೋಮವಾರದಿಂದ 3 ದಿನಗಳ ಹಮ್ಮಿಕೊಂಡಿರುವ ಗೊಂಡಿ ಭಾಷೆಯ ನುಡಿಕೋಶ ಪ್ರಮಾಣೀಕರಣದ 7ನೇ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಂಗಳವಾರ ಮಾತನಾಡಿದರು.
‘ಕ್ರಿ.ಶ. 358 ರಲ್ಲಿ ಗೊಂಡಿ ಸಮು ದಾಯದ ಅರಸರು ಈ ಭಾಗದಲ್ಲಿ ಆಳ್ವಿಕೆ ನಡೆಸಿದ್ದರು ಎನ್ನುವುದು ಶಾಸನಗಳಿಂದ ತಿಳಿದುಬರುತ್ತದೆ. 4 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಗೊಂಡಿ ಭಾಷೆ ತನ್ನದೆ ಆದ ಪರಂಪರೆ ಹೊಂದಿದೆ. ಈ ಭಾಷೆಗೆ ರಾಷ್ಟ್ರೀಯ ಮಾನ್ಯತೆ ದೊರಕಿಸುವುದು ನಮ್ಮ ಸಂಕಲ್ಪವಾಗಿದೆ’ ಎಂದರು.
‘ಕುರುಬ, ಹಾಲುಮತ, ಭಘೇಲ, ಪಾಲ್, ಧನಗರ್ ಎಂಬ ಹೆಸರಿನಿಂದ ಕರೆಯುವ ಕುರುಬ ಸಮುದಾಯದ ಜನ ದೇಶದ ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಾರೆ. 15 ರಾಜ್ಯಗಳ ಗೊಂಡಿ ಭಾಷಾ ತಜ್ಞರು ಸೇರಿ ಗೊಂಡಿ ಭಾಷೆಯ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಗೊಂಡಿ ಭಾಷೆಯ ನುಡಿಕೋಶ ಪ್ರಮಾಣೀಕರಣ ಕಾರ್ಯವನ್ನು 2009 ರಿಂದ ಆರಂಭಿಸಲಾಗಿದೆ’ ಎಂದು ತಿಳಿಸಿದರು.
‘2014 ರಲ್ಲಿ ದೆಹಲಿಯ ರಾಜಘಾಟ್ ಬಳಿಯ ಗಾಂಧಿ ಸ್ಮತಿ ಸದನದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಈ ಬಗ್ಗೆ ವಿಸ್ತೃತವಾದ ಚರ್ಚೆ ನಡೆದು ಪ್ರಮಾಣೀಕರಣ ಕಾರ್ಯಕ್ಕೆ ಅಂತಿಮ ರೂಪ ಕೊಡಲಾಗಿದೆ. 4 ಸಾವಿರ ಶಬ್ದಗಳ ನಿಘಂಟು ಹೊರ ತರುವ ಸಿದ್ಧತೆ ಪೂರ್ಣಗೊಂಡಿದೆ’ ಎಂದು ಮಾಹಿತಿ ನೀಡಿದರು.
‘ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ 6 ರಾಷ್ಟ್ರೀಯ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗಿದೆ. ತಿಂಥಣಿ ಹತ್ತಿರದ ಕನಕ ಗುರುಪೀಠದಲ್ಲಿ ಜ. 12, 13, 14 ರಂದು ಏರ್ಪಡಿಸಿರುವ ‘ಹಾಲುಮತ ಸಂಸ್ಕೃತ ವೈಭವ’ ಕಾರ್ಯಕ್ರಮದ ಅಂಗವಾಗಿ 7ನೇ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಇಲ್ಲಿ ಆಯೋಜಿಸಲಾಗಿದೆ’ ಎಂದರು.
‘ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಸಂಸದರು, ಮುಖ್ಯಮಂತ್ರಿ, ಸಚಿವರು ಭಾಗವಹಿಸುತ್ತಿದ್ದಾರೆ. ಗೊಂಡಿ ಭಾಷೆಯ ಬಗ್ಗೆ ಅವರಿಗೆ ಮಾಹಿತಿ ನೀಡಿ ಅವರ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಲೋಕಸಭೆಯಲ್ಲಿ ಮಂಡಿಸಿ ಸಂವಿಧಾನದ ಕಲಂ 8ನೇ ಪರಿಚ್ಚೇದದಡಿಯಲ್ಲಿ ಸೇರಿಸಲು ಒತ್ತಾಯಿಸಲಾಗುವುದು’ ಎಂದು ಹೇಳಿದರು.
‘ಗೊಂಡಿ ಆದಿವಾಸಿ ಸಮುದಾಯದ 8 ಜನ ಸಂಸದರು ಇದ್ದಾರೆ. ರಾಜ್ಯದಲ್ಲಿ ಅನೇಕ ಶಾಸಕರು, ಸಚಿವರು ಇದ್ದಾರೆ. ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಛತ್ತಿಸಗಡ್, ಮಧ್ಯಪ್ರದೇಶ, ಒರಿಸ್ಸಾ, ಉತ್ತರ ಪ್ರದೇಶ, ಜಾರ್ಖಂಡ್, ಉತ್ತರಾಂಚಲ್, ರಾಂಚಿ ಸೇರಿದಂತೆ 15 ರಾಜ್ಯಗಳ ಭಾಷಾ ತಜ್ಞರು ಗೊಂಡಿ ಭಾಷೆಯ ಪ್ರಮಾಣೀಕರಣದ ಶಿಬಿರದಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ’ ಎಂದು ತಿಳಿಸಿದರು.
ಛತ್ತಿಸಗಡ್ ಗೊಂಡವಾನ್ ದರ್ಶನ ಸಂಪಾದಕ ತಿರುಸುನೇರ ಸಿಂಗ್ ತರಮ್, ಇಂದೂರಿನ ರಾಣಿ ದುರ್ಗಾದೇವಿ, ಗೊಂಡವಾನ್ ವಿಕಾಸ್ ಪರಿಷತ್ ಮುಖ್ಯಸ್ಥ ತಿರುಮಲ್ ಸುಶೀಲಾ ದರವೇ, ಹಂಪಿ ವಿವಿ ಬುಡಕಟ್ಟು ಅಧ್ಯಯನ ಕೇಂದ್ರದ ಡಾ. ಚಲುವರಾಜು, ಮಧ್ಯಪ್ರದೇಶದ ಉಪನ್ಯಾಸಕಿ ವಿ.ಕೆ. ಈರಾಸನ್ ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.