ಶಿವಮೊಗ್ಗ: ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜ. 15ರಿಂದ 19ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಶಿವಮೊಗ್ಗ ರಂಗಾಯಣವು ಮೊದಲ ಬಾರಿಗೆ ಅಂತರರಾಷ್ಟ್ರೀಯ ನಾಟಕೋತ್ಸವ ಆಯೋಜಿಸಿದೆ ಎಂದು ರಂಗಾಯಣದ ಆಡಳಿತಾಧಿಕಾರಿ ಮಂಗಳಾ ವೆಂ. ನಾಯಕ್ ತಿಳಿಸಿದರು.
ಜ.15ರಂದು ಸಂಜೆ 6ಕ್ಕೆ ನಾಟಕೋತ್ಸವಕ್ಕೆ ರಂಗಕರ್ಮಿ ಕೆ.ವಿ. ಅಕ್ಷರ ಚಾಲನೆ ನೀಡಲಿದ್ದಾರೆ. ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್ ಪಾಲ್ಗೊಳ್ಳುವರು ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಅಂದು ಸಂಜೆ 6.45ಕ್ಕೆ ಭಾಸ ಮಹಾಕವಿಯ ಕೆೇರಳದ ಸೋಪಾನಂ ತಂಡ ಪ್ರಸ್ತುತ ಪಡಿಸುವ, ಕಾವಲಂ ನಾರಾಯಣ ಫಣಿಕ್ಕರ್ ನಿರ್ದೇಶಿಸಿರುವ ‘ಮಧ್ಯಮ ವ್ಯಾಯೋಗಂ’ ಸಂಸ್ಕೃತ ನಾಟಕ ಪ್ರದರ್ಶನಗೊಳ್ಳಲಿದೆ. ಜ. 16ರಂದು ಲಂಡನ್ನ ವರ್ಜು ಆರ್ಟ್್ಸ ಥಿಯೇಟರ್ ಕಂಪೆನಿಯು ಓಲ್ಯುಕ್ಯುಲಿ ಕೊಡ್ಜಕ್ಕುಲಿ ನಿರ್ದೇಶನದ ‘ಮಜ್ನೂ–ಮ್ಯಾಡ್ ಮ್ಯಾನ್ ಇನ್ ಲವ್’ ಎಂಬ ಆಂಗ್ಲ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.
ಜ. 17ರಂದು ಜಮ್ಮು–ಕಾಶ್ಮೀರದ ಅಮೆಚೂರ್ ಥಿಯೇಟರ್ ಗ್ರೂಪ್ ಖಾಲಿದ್ ಹುಸೇನ್ ರಚನೆಯ, ಪ್ರೀತಂ ಕಟೋಚ್ ಅವರ ರಂಗರೂಪವನ್ನು ಮುಷ್ತಾಕ್ ಕಕ್ ನಿರ್ದೇಶಿಸಿರುವ ಉರ್ದು ನಾಟಕ ‘ಇಷ್ಕ್ ಮಲಂಗಿ’ ಪ್ರದರ್ಶನಗೊಳ್ಳಲಿದೆ. ಜ. 18ರಂದು ನೀನಾಸಂ ತಂಡವು ಭವಭೂತಿ ರಚನೆಯ, ಕೆ.ವಿ. ಅಕ್ಷರ ನಿರ್ದೇಶಿಸಿರುವ ‘ಮಾಲತಿ ಮಾಧವ’ ಸಂಸ್ಕೃತ ನಾಟಕ ಪ್ರದರ್ಶನಗೊಳ್ಳಲಿದೆ. ಜ. 19ರಂದು ರವೀಂದ್ರನಾಥ ಠಾಗೋರ್ ಅವರ, ಸುಧಾ ಅಡುಕುಳ ಅನುವಾದಿಸಿರುವ, ಡಾ.ಶ್ರೀಪಾದ ಭಟ್ ನಿರ್ದೇಶನದ ‘ಚಿತ್ರಾ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಅವರು ತಿಳಿಸಿದರು.
ನಾಟಕೋತ್ಸವದ ಸಮಾರೋಪ ಸಮಾರಂಭ ಜ.19ರಂದು ನಡೆಯಲಿದ್ದು, ಚಿತ್ರನಟ ಸುಂದರರಾಜ್, ಶಾಸಕ ಕೆ.ಬಿ.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸ್ನಕುಮಾರ್ ಉಪಸ್ಥಿತರಿರುವರು ಎಂದರು.
ಪ್ರತಿ ನಾಟಕಕ್ಕೆ ₹ 30 ಪ್ರವೇಶ ಶುಲ್ಕವಿದ್ದು, ರಂಗಾಯಣ ಕಚೇರಿ, ಶ್ರೀನಿಧಿ ಸಿಲ್ಕ್ಸ್ ಅಂಡ್ ಟೆಕ್ಸ್ ಟೈಲ್ಸ್, ಮಲೆನಾಡು ಮೀಡಿಯಾ ಕಚೇರಿ, ಲಕ್ಷ್ಮೀ ವೆಂಕಟೇಶ್ವರ ಅಯ್ಯಂಗಾರ್ ಬೇಕರಿ, ವಿನೋಬನಗರ ಸವಿ ಬೇಕರಿಗಳಲ್ಲಿ ಟಿಕೆಟ್ ಲಭ್ಯವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಾವಿದರ ಒಕ್ಕೂಟದ ಲಕ್ಮ್ಮೀನಾರಾಯಣ್, ಡಾ.ಸಾಸ್ವೆಹಳ್ಳಿ ಸತೀಶ್, ವೈದ್ಯ, ಹೊನ್ನಾಳಿ ಚಂದ್ರಶೇಖರ್, ಆರ್.ಎಸ್.ಹಾಲಸ್ವಾಮಿ, ಚೇತನ್, ಮಂಜುನಾಥ ಸ್ವಾಮಿ ಉಪಸ್ಥಿತರಿದ್ದರು.