ಅಕಾರಣವಾಗಿ ನಡೆಯುವ ಮರು ಚುನಾವಣೆಗಳು ಸರ್ಕಾರಕ್ಕೆ ಅನಗತ್ಯ ಹೊರೆ. ಇದಕ್ಕೆ ನಂಜನಗೂಡು ವಿಧಾನಸಭಾ ಕ್ಷೇತ್ರದ ಮರು ಚುನಾವಣೆಯೇ ಉದಾಹರಣೆ. ಇಲ್ಲಿನ ಜನಪ್ರತಿನಿಧಿಯಾಗಿದ್ದ ಶ್ರೀನಿವಾಸ ಪ್ರಸಾದ್ ಅವರು ರಾಜಕೀಯದಲ್ಲಿ ನುರಿತ ವ್ಯಕ್ತಿ. ಆದರೆ ಅವರು ಹೀಗೆ ಅಕಾಲಿಕವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೊಂದು ಪಕ್ಷದಿಂದ ಚುನಾವಣೆ ಎದುರಿಸಲು ಹೊರಟಿರುವುದು ಮತದಾರರಿಗೆ ಹೇಗೆ ಸರಿಯೆನಿಸುತ್ತದೆ?
ಮಂತ್ರಿ ಪದವಿ ಕಳೆದುಕೊಂಡದ್ದೇ ಅವರ ರಾಜೀನಾಮೆಗೆ ಮುಖ್ಯ ಕಾರಣ. ಅವರು ಪಕ್ಷ ಬದಲಿಸುತ್ತಿರುವುದು ಇದು ಮೊದಲೇನಲ್ಲ. ಈಗಲೂ ಅವರು ಅದಕ್ಕಾಗಿ ಯಾವುದೇ ಮುಜುಗರ ಪಟ್ಟಂತಿಲ್ಲ. ಮಂತ್ರಿ ಪದವಿ ಇಲ್ಲದಿದ್ದರೆ ತಮ್ಮ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಅವರಿಗೆ ಸಾಧ್ಯವಾಗದೇ?
ಬಹುಪಾಲು ರಾಜಕಾರಣಿಗಳ ಮನೋಧೋರಣೆ ಇದೇ ಆಗಿದೆ. ಒಬ್ಬ ಜನಪ್ರತಿನಿಧಿಗೆ ಜನಸೇವೆಯೇ ಗುರಿಯಾಗಿದ್ದರೆ ಅದಕ್ಕೆ ಮಂತ್ರಿ ಪದವಿಯ ಅವಶ್ಯಕತೆ ಇರುವುದಿಲ್ಲ. ಮತದಾರರು ಇಂಥ ವಿಚಾರಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕು.
-ಕೆ.ಎಸ್.ಸೋಮೇಶ್ವರ, ಬೆಂಗಳೂರು