ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯ ಪದ್ಧತಿ: ಅವೈಜ್ಞಾನಿಕ ಕಲಸುಮೇಲೋಗರ

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

ಆಯುಷ್ ಚಿಕಿತ್ಸಕರಿಗೆ ಅಲೋಪಥಿ ಪದ್ಧತಿಯ ತರಬೇತಿ ನೀಡುವ ಕುರಿತು ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಎತ್ತಿರುವ ಪ್ರಶ್ನೆಗಳು (ಸಂಗತ, ಜ. 10) ಸಕಾಲಿಕ. ಆದರೆ, ಇಲ್ಲಿ ಎಂಬಿಬಿಎಸ್ ವೈದ್ಯರು ಗ್ರಾಮೀಣ ಸೇವೆಗೆ ಹೋಗದಿರುವ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ಅದಕ್ಕೆ ಯುವ ವೈದ್ಯರು ನೀಡುವ ಪ್ರಮುಖ ಕಾರಣ– ‘ಈ ಚಿಕಿತ್ಸಾಲಯಗಳಲ್ಲಿ ಮೂಲ ಸೌಕರ್ಯ, ಔಷಧಿಗಳ ಕೊರತೆ ಇದ್ದು ರೋಗಿಗಳಿಗೆ ನ್ಯಾಯ ಒದಗಿಸಲು ಆಗದೆ ಪರಿತಪಿಸಬೇಕು’. ವೈದ್ಯರಿಗೆ ಇದು ಹತಾಶೆ ತರುವ ವಿಷಯ.

ಇತ್ತೀಚಿನ ದಿನಗಳಲ್ಲಿ ರೋಗಿಗಳೂ ಹೆಚ್ಚಿನ ತಿಳಿವಳಿಕೆ (ಬಹಳ ಸಲ ತಪ್ಪಾಗಿಯೂ) ಪಡೆದು ಸಹಜವಾಗಿ ವೈದ್ಯರ ಮೇಲೆ ಹೆಚ್ಚಿನ ಒತ್ತಡ ಹೇರುತ್ತಾರೆ. ವೈದ್ಯರ ಕೊರತೆಯ ಸಮಸ್ಯೆ ತೀವ್ರವಾಗಿದ್ದು, ಇರುವ ಒಂದಿಬ್ಬರ ಮೇಲೆಯೇ ಹೆಚ್ಚು ಒತ್ತಡ ಬೀಳುವುದು ಸರ್ವೇಸಾಮಾನ್ಯ.

ಈ ವಿಷಯ ಅರಿಯದ ರೋಗಿಗಳ ಉಗ್ರ ಕೋಪಕ್ಕೂ ಅವರು ಬಲಿಯಾಗಬೇಕಾಗುತ್ತದೆ. ಜೊತೆಗೆ, ಪುಢಾರಿಗಳು, ಸ್ಥಳೀಯ ನಾಯಕರು ಈ ಪರಿಸ್ಥಿತಿಯ ದುರ್ಲಾಭ ಪಡೆಯುವುದು, ಸ್ವತಃ ಅಥವಾ ಗೂಂಡಾಗಳ ಮೂಲಕ ವೈದ್ಯರ ಮೇಲೆ ಹಲ್ಲೆ ನಡೆಸುವುದು ಆಗಾಗ ವರದಿಯಾಗುತ್ತಲೇ ಇರುತ್ತದೆ.

ಯಾವುದೇ ಭದ್ರತೆ ಇಲ್ಲದೆ ವೈದ್ಯರು ತಮ್ಮದಲ್ಲದ ತಪ್ಪಿಗೆ ಶಿಕ್ಷೆಗೆ ಗುರಿಯಾಗುವುದರ ಕುರಿತೂ ಯೋಚಿಸಬೇಕಾಗಿದೆ. ಈ ಅಭದ್ರತೆಯ ಕಾರಣ ಸ್ತ್ರೀ ವೈದ್ಯರ ಪರಿಸ್ಥಿತಿ ಇನ್ನೂ ಘೋರವಾಗಿರುತ್ತದೆ.

ಕೊಳಕು ರಾಜಕಾರಣ ಮಧ್ಯ ಪ್ರವೇಶಿಸಿ ವೈದ್ಯರ ಮೇಲೆ ಒತ್ತಡ ಹೇರುವುದು ಈ ವ್ಯವಸ್ಥೆಯಲ್ಲಿ ಹೊಸತೇನಲ್ಲ. ಅದರಲ್ಲೂ ಶವ ಪರೀಕ್ಷೆ ಪ್ರಕರಣಗಳಲ್ಲಿ ಸಿಲುಕಿಕೊಂಡರೆ ಪಾರಾಗುವುದು ಕಷ್ಟ ಎನ್ನುತ್ತಾರೆ ಕೆಲವು ಹಿರಿಯ ವೈದ್ಯರು. ಈ ಭ್ರಷ್ಟ ವ್ಯವಸ್ಥೆಯಲ್ಲಿ ಪ್ರಾಮಾಣಿಕ ವೈದ್ಯರು ಪಡುವ ಪಡಿಪಾಟಲು ಯಾರಿಗೆ  ಗೊತ್ತಿಲ್ಲ?

ವೈದ್ಯಕೀಯ ಶಿಕ್ಷಣದ ಖಾಸಗೀಕರಣವೇ ಈ ವೃತ್ತಿಯಲ್ಲಿನ ಉದಾತ್ತತೆಗೆ ಕೊಡಲಿ ಏಟು ಹಾಕಿದ್ದು. ನಂತರ ಬಂದ ಆರೋಗ್ಯ ಸೇವೆಯ ಕಾರ್ಪೊರೆಟೀಕರಣ ಇದನ್ನು ಪೂರ್ಣ ವ್ಯಾಪಾರವನ್ನಾಗಿಸಿಬಿಟ್ಟಿದೆ. ಹಾಗಾಗಿ, ಈ ವೃತ್ತಿಯಲ್ಲಿ ಉದಾತ್ತವಾದುದು, ಸೇವೆಯೇ ಪರಮಗುರಿ ಎನ್ನುವ ಮಾತುಗಳು ಈಗ ಸವಕಲಾಗಿವೆ. ಹೀಗಿರುವಾಗ, ಉಳಿದುಕೊಳ್ಳಲು ಕನಿಷ್ಠ ಸೌಲಭ್ಯಗಳಿರುವ ಮನೆ, ಮಕ್ಕಳಿಗೆ ಒಳ್ಳೆಯ ಶಾಲಾ-ಕಾಲೇಜಿನಂಥ ಸೌಕರ್ಯಗಳಿಲ್ಲದೆಡೆ ವೈದ್ಯರು ಸೇವೆ ಸಲ್ಲಿಸಬೇಕು, ತಮ್ಮ ಕುಟುಂಬವನ್ನು ಕಷ್ಟಕ್ಕೆ ಒಳಪಡಿಸಬೇಕು ಎಂದು ನಿರೀಕ್ಷಿಸುವುದು ಸಾಧುವೇ? ಅದರಲ್ಲೂ ಅವರಿಗೆ ಬೇರೆ ಆಯ್ಕೆಗಳಿದ್ದಾಗ!

ಅಷ್ಟೆಲ್ಲಾ ಕಷ್ಟಗಳಿದ್ದರೂ ಸೇವಾ ಮನೋಭಾವದ ಹಲವಾರು ವೈದ್ಯರು ಗ್ರಾಮೀಣ ಸೇವೆಗೆ ಸಿದ್ಧರಿರುತ್ತಾರೆ. ಯಾವುದೇ ರಾಜಕೀಯ ಹಸ್ತಕ್ಷೇಪವಿಲ್ಲದೆ ಅವರಿಗೆ ತಮ್ಮ ಕರ್ತವ್ಯ ನಿರ್ವಹಿಸುವ ಮುಕ್ತ ವಾತಾವರಣವನ್ನು, ರೋಗಿಗಳಿಗೆ ಅತ್ಯವಶ್ಯವಾದ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಡಬೇಕಷ್ಟೆ.

ಇವುಗಳ ಕಡೆಗೆ ಗಮನ ನೀಡದೆ, ವೈದ್ಯರು ಇಲ್ಲಿ ಬರುವುದಿಲ್ಲ ಎಂಬ ನೆಪವೊಡ್ಡಿ ಗ್ರಾಮೀಣ ಪ್ರದೇಶದವರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಪರಿಗಣಿಸಿ, ಎರಡು-ಮೂರು ವೈದ್ಯಕೀಯ ಪದ್ಧತಿಗಳ ಅವೈಜ್ಞಾನಿಕ ಕಲಸುಮೇಲೋಗರವನ್ನು ಅವರಿಗೆ ಉಣಬಡಿಸುವುದು ಎಲ್ಲಿಯ ನ್ಯಾಯ?

*
ಸನ್ನಿವೇಶಕ್ಕೆ ತಕ್ಕ ನಿರ್ಣಯ
‘ಆಯುಷ್‌ ಚಿಕಿತ್ಸೆ:
ಶಂಕಾಸ್ಪದ ನಡೆ’ ಎಂಬ ಲೇಖನದಲ್ಲಿ (ಸಂಗತ, ಜ. 10) ‘ಸರ್ಕಾರ ಜನಹಿತಕ್ಕೆ ವಿರುದ್ಧವಾಗಿ ತನಗಿಷ್ಟವಾದ ಸ್ಥಾಪಿತ ಹಿತಾಸಕ್ತಿಗಳ ಬೆಂಬಲಕ್ಕೆ ನಿಂತರೆ ಹೇಗಾದೀತು’ ಎಂದು ಲೇಖಕರು ಕೇಳಿದ್ದಾರೆ. ಈ ಮಾತುಗಳನ್ನು ಅವರು ಸ್ಪಷ್ಟ ನಿದರ್ಶನಗಳೊಂದಿಗೆ, ಯಾವುದು ಜನಹಿತಕ್ಕೆ ವಿರೋಧ ಮತ್ತು ಸ್ಥಾಪಿತ ಹಿತಾಸಕ್ತಿಗಳು ಯಾರು ಎಂದು ಮನವರಿಕೆ ಮಾಡಿಕೊಟ್ಟರೆ ನಾವು ಆರೋಪ ಮುಕ್ತರಾಗಲು ಸಹಾಯವಾಗುತ್ತದೆ.

ರಾಜ್ಯದ ಗ್ರಾಮೀಣ ಪ್ರದೇಶಗಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹುದ್ದೆ ಖಾಲಿ ಇರುವುದು ಲೋಕವೇ ಬಲ್ಲ ಸತ್ಯ. ಮಾಧ್ಯಮಗಳು ಮತ್ತು ವಿಧಾನ ಮಂಡಲದಲ್ಲಿ ಇದರ ಬಗ್ಗೆ ವ್ಯಾಪಕವಾಗಿ ಟೀಕೆ, ವಿಮರ್ಶೆ ಕೂಡ ಬಂದಿದೆ. ಗುತ್ತಿಗೆ ಆಧಾರದ ಮೇಲೆ ಎಂಬಿಬಿಎಸ್‌ ಪದವೀಧರರನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದ್ದರೂ ಹುದ್ದೆಗಳು ಭರ್ತಿಯಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಬಂದು ಕೆಲಸ ಮಾಡಲು ಸಿದ್ಧರಿರುವ ವೈದ್ಯರಿಗೆ ಮನೆ ಭತ್ಯೆ ಕೊಡಬೇಕೆಂಬ ಆರೋಗ್ಯ ಇಲಾಖೆಯ ಸಲಹೆ ಸರ್ಕಾರದ ಮುಂದಿದೆ.

ದೇಶದಲ್ಲಿ ಅತ್ಯಂತ ಹೆಚ್ಚು ವೈದ್ಯಕೀಯ ಕಾಲೇಜುಗಳು ಇರುವ ರಾಜ್ಯ ಕರ್ನಾಟಕ (53 ಕಾಲೇಜುಗಳು). ನಮ್ಮಲ್ಲಿರುವ ಒಟ್ಟು 2,353 ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 400 ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ವೈದ್ಯ ಪದವೀಧರರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಸಿದ್ಧರಿಲ್ಲ ಹಾಗೂ ಸರ್ಕಾರ ಮಾಡಿದ ಶಾಸನವನ್ನು ಪ್ರಶ್ನಿಸಿ, ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದಾರೆ.

ಸರ್ಕಾರಿ ಆಸ್ಪತ್ರೆಗಳನ್ನು ಪ್ರಾರಂಭಿಸಲು ಕೋಟ್ಯಂತರ ರೂಪಾಯಿ ಬಂಡವಾಳ ಸರ್ಕಾರದಲ್ಲಿಲ್ಲ. ಗ್ರಾಮೀಣ ಪ್ರದೇಶದಲ್ಲಿ ವೈದ್ಯರಿಲ್ಲದ ಕಾರಣ, ಬಡಜನ  ಅನಿವಾರ್ಯವಾಗಿ ನಕಲಿ ವೈದ್ಯರನ್ನು ಆಶ್ರಯಿಸಿದ್ದಾರೆ. ಇಂತಹ ಕ್ಲಿಷ್ಟ ಸನ್ನಿವೇಶದಲ್ಲಿ, ಅಲೋಪಥಿಯಲ್ಲದ ಇತರ ಭಾರತೀಯ ವೈದ್ಯ ಪದ್ಧತಿಗಳಲ್ಲಿ ಪದವೀಧರರಾಗಿರುವವರನ್ನು ವೈದ್ಯಾಧಿಕಾರಿಗಳಾಗಿ ನೇಮಿಸಿಕೊಳ್ಳಲು ಸರ್ಕಾರ ನಿರ್ಣಯಿಸಿದೆ.

ಆಯುರ್ವೇದ/ ಆಯುಷ್‌ ವೈದ್ಯ ಪದವೀಧರರು ಕೂಡ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳಿಂದ ಮಾನ್ಯತೆ ಪಡೆದು ಐದೂವರೆ ವರ್ಷದ ವೈದ್ಯ ಶಿಕ್ಷಣವನ್ನು ವ್ಯಾಸಂಗ ಮಾಡಿರುವವರೇ ಆಗಿರುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಆ ತಕ್ಷಣಕ್ಕೆ ಎದುರಾಗುವ ತುರ್ತು ಸನ್ನಿವೇಶಗಳಿಗೆ ಸ್ಪಂದಿಸಲು ಆಯುಷ್‌ ವೈದ್ಯ ಪದವೀಧರರಿಗೆ ಅಲೋಪಥಿ ಔಷಧ ವ್ಯವಸ್ಥೆಯಲ್ಲಿ ಕನಿಷ್ಠ ತಿಳಿವಳಿಕೆ ಹೊಂದಲು 6 ತಿಂಗಳ ತರಬೇತಿ ಕೊಡುವುದು ಸರ್ಕಾರದ ಉದ್ದೇಶ. ಸರ್ಕಾರಿ ಸೇವೆಯ ಹೊರಗಿರುವ ಆಯುಷ್‌ ವೈದ್ಯರಿಗೆ ಇದು ಅನ್ವಯಿಸುವುದಿಲ್ಲ.

ಉಡುಪಿಯ ತಾಯಿ ಮತ್ತು ಮಗುವಿನ ಆಸ್ಪತ್ರೆ, ಹಾಜಿ ಅಬ್ದುಲ್ಲಾ ಸ್ಮಾರಕ ಸರ್ಕಾರಿ ಆಸ್ಪತ್ರೆಯಾಗಿದ್ದು ಮುಂದೆಯೂ ಸರ್ಕಾರಿ ಆಸ್ಪತ್ರೆಯಾಗೇ ಮುಂದುವರೆಯುತ್ತದೆ. ಕಟ್ಟಡವನ್ನು ಕಟ್ಟಲು ಮುಂದೆ ಬಂದಿರುವ ಸಂಸ್ಥೆಗೆ ಭೂಮಿಯನ್ನು ಸೀಮಿತ ಉದ್ದೇಶಕ್ಕೆ ಮತ್ತು ಅವಧಿಗೆ ಗುತ್ತಿಗೆ ಕೊಟ್ಟಿದ್ದೇವೆಯೇ ಹೊರತು ಪರಭಾರೆ ಮಾಡಿಲ್ಲ. ಈ ಸಂಬಂಧ ಎಲ್ಲಾ ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಸರ್ಕಾರಕ್ಕೆ ಸಂಪನ್ಮೂಲಗಳ ಕೊರತೆಯಿದ್ದಾಗ ಸರ್ಕಾರಿ ವ್ಯವಸ್ಥೆಯಲ್ಲೇ ಖಾಸಗಿಯವರ ನೆರವನ್ನು ಪಡೆದು ಸಾರ್ವಜನಿಕರಿಗೆ ಹೆಚ್ಚು ಉಪಯೋಗವಾಗುವಂತೆ ಮಾಡುವುದು ಕೂಡ ಅಪರಾಧವೇ ಆದಲ್ಲಿ, ಅಂತಹ ಅಪರಾಧಗಳನ್ನು ನಾವು ಇನ್ನೂ ಹೆಚ್ಚು ಹೆಚ್ಚು ಮಾಡಬಯಸುತ್ತೇವೆ.
–ಕೆ.ಆರ್‌.ರಮೇಶ್‌ ಕುಮಾರ್‌
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT