ಲಕ್ಷ್ಮೇಶ್ವರ: ಹಳೆ ಜರ್ಮನಿ, ತಾಮ್ರ, ಹಿತ್ತಾಳೆ ಸಾಮಾನುಗಳನ್ನು ಕರಗಿಸಿ ಅದ ರಿಂದ ಆಕರ್ಷಕ ದೇವರ ಮೂರ್ತಿ ಗಳನ್ನು ತಯಾರಿಸುವುದನ್ನೇ ತಮ್ಮ ನಿತ್ಯ ಕಾಯಕವನ್ನಾಗಿ ಮಾಡಿಕೊಂಡ ಅಪರೂ ಪದ ಕಲಾವಿದರು ಈಚೆಗೆ ಲಕ್ಷ್ಮೇಶ್ವರಕ್ಕೂ ಬಂದಿದ್ದರು.
ದೂರದ ಗುಲಬರ್ಗಾ ಜಿಲ್ಲೆಯಿಂದ ಬಂದಿದ್ದ ಇಸ್ಲಾಯಿಲ್ ಹಾಗೂ ದಾದಾಪೀರ್ ಅವರೇ ಈ ಕಲೆಯನ್ನು ನೆಚ್ಚಿ ಜೀವನ ಸಾಗಿಸುತ್ತಿರುವವರು.
ನಾಡಿನ ಪ್ರತಿ ಊರನ್ನು ಸುತ್ತುತ್ತ ಹಳೆ ಲೋಹಗಳನ್ನು ಕರಗಿಸಿ ಪೂಜೆಗೆ ಅರ್ಹವಾದ ದೇವರ ಮೂರ್ತಿಗಳನ್ನು ತಯಾರಿಸಿ ಕೊಡುವುದೇ ಇವರ ದುಡಿಮೆ. ಮುಸ್ಲಿಂರಾದರೂ ಹಿಂದೂ ದೇವತೆಗಳ ತಯಾರಿಕೆ ಇವರ ಹೊಟ್ಟೆ ಯನ್ನು ಹೊರೆಯುತ್ತಿದೆ.
ಈ ಕಲಾವಿದರು ಓಣಿಗೆ ಬಂದಾದ ರೆಂದರೆ ಅಂದು ಹಳೆಯ ಮತ್ತು ಒಡೆದು ತೂತಾಗಿರುವ ಸಾಮಾನುಗಳು ಇವರ ಮುಂದೆ ರಾಶಿಯಾಗಿ ಬೀಳುತ್ತವೆ.
ಅವುಗಳನ್ನು ತಂದವರು ತಮಗೆ ಇಷ್ಟವಾದ ದೇವರ ಮೂರ್ತಿಯನ್ನು ಮಾಡಿಕೊಡು ವಂತೆ ಹೇಳಿದಾಗ ಜನರು ತಂದ ಹಳೆ ಲೋಹವನ್ನು ಪಾತ್ರೆಯಲ್ಲಿ ಹಾಕಿ ಅದನ್ನು ರಸ ಆಗುವವರೆಗೆ ಚೆನ್ನಾಗಿ ಕುದಿಸುತ್ತಾರೆ. ಹೀಗೆ ಬಂದ ರಸವನ್ನು ಅಚ್ಚಿಗೆ ಹಾಕಿದಾಗ ಅದೊಂದು ಸುಂದರವಾದ ಮೂರ್ತಿ ಯಾಗಿ ಕಂಗೊಳಿಸುತ್ತಿದೆ. ಸಣ್ಣ ಸಣ್ಣ ಮೂರ್ತಿ ತಯಾರಿಸಿ ಕೊಡಲು ಇವರು ₹ 150 ರೂಪಾಯಿ ಕೂಲಿ ಪಡೆಯುತ್ತಾರೆ. ಮೂರ್ತಿ ದೊಡ್ಡದಿದ್ದರೆ ಕೂಲಿ ಇನ್ನೂ ಹೆಚ್ಚಾಗುತ್ತದೆ.
‘ಮದ್ಲ ನಮ್ಮ ಹಿರೇರು ಮೂರ್ತಿ ತಯಾರ ಮಾಡ್ತಿದ್ರು. ಅದನ್ನ ನಾವು ಮಾಡಕೋಂತ ಹೊಂಟೇವಿ. ಒಂದು ಊರಾಗ ಕೆಲ್ಸಾ ಸಿಕ್ಕರ ಮತ್ತೊಂದು ಊರಾಗ ಸಿಗಂಗಿಲ್ಲ. ಆದರೂ ಹಿಂದಿ ನಿಂದ ಬಂದ ಕೆಲ್ಸಾ ಕೈ ಬಿಡಂಗಿಲ್ರೀ’ ಎಂದು ಇಸ್ಲಾಯಿಲ್ ಪ್ರಜಾವಾಣಿಯೊಂ ದಿಗೆ ತಮ್ಮ ಅನುಭವ ಹಂಚಿಕೊಂಡರು.
ವೀರಭದ್ರ, ಲಕ್ಷ್ಮಿ, ಸರಸ್ವತಿ, ಹನುಮಂತ, ಮೈಲಾರಲಿಂಗಪ್ಪ, ಯಲ್ಲಮ್ಮ ಹೀಗೆ ಹಲವಾರು ದೇವರುಗಳ ಸುಂದರವಾದ ಮೂರ್ತಿಗಳನ್ನು ಇವರು ತಯಾರಿಸಬಲ್ಲರು. ಇಂಥ ಕಲೆಯಿಂದಲೇ ಬದುಕು ಕಟ್ಟಿಕೊಂಡಿರುವ ಇವರ ಸಾಧನೆ ಶ್ಲಾಘನೀಯ.
***
ಮನ್ಯಾಗ ತೂತು ಬಿದ್ದ ಪಾತ್ರಿ ಪಗಡ ಇರ್ತಾವ್ರೀ. ಅದರಿಂದನ ಇವರು ಚಲೋ ಮೂರ್ತಿಗೋಳ ತಯಾರಿಸಿ ಕೊಡ್ತಾರ
-ಹನಮಂತಪ್ಪ ಶೆರಸೂರಿ
ಸ್ಥಳೀಯ ನಿವಾಸಿ