ಹಾವೇರಿ: ‘ಹೆಚ್ಚು ಇಳುವರಿಯ ಆಸೆಯಿಂದ ಮನುಷ್ಯ ಭೂಮಿಯ ಆರೋಗ್ಯವನ್ನು ಹಾಳು ಮಾಡುತ್ತಿದ್ದಾನೆ. ಹಸಿರು ಕಾಂತ್ರಿಯ ನಾಗಾಲೋಟದಲ್ಲಿ ದೇಶೀಯ ತಳಿಯ ಸಸ್ಯಗಳನ್ನು ಉಳಿಸಿ ಬೆಳೆಸಬೇಕಾಗಿದೆ’ ಎಂದು ನವದೆಹಲಿಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರ ಅಧ್ಯಕ್ಷ ಡಾ.ಆರ್.ಆರ್.ಹಂಚಿನಾಳ ಹೇಳಿದರು.
ರಾಣಿಬೆನ್ನೂರ ತಾಲ್ಲೂಕಿನ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ನವದೆಹಲಿಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ‘ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ ೨೦೦೧’ ಕುರಿತು ರೈತರಿಗೆ ಹಮ್ಮಿಕೊಂಡ ಅರಿವು ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ನವದೆಹಲಿಯ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ರಿಜಿಸ್ಟ್ರಾರ್ ಜನರಲ್ ಡಾ.ಆರ್.ಸಿ.ಅಗರವಾಲ ಮಾತನಾಡಿ, ‘ರೈತರು ತಮ್ಮಲಿರುವ ವಿಶಿಷ್ಟ ದೇಶಿ ತಳಿಗಳ ಸಸ್ಯ ಹಾಗೂ ಬೀಜಗಳನ್ನು ಕೃಷಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸಿ, ಅದರ ಲಾಭವನ್ನು ಪಡೆಯುವಂತೆ ಮಾಡಬೇಕು. ವಿಶೇಷ ಸಸ್ಯ ಹಾಗೂ ಬೀಜಗಳನ್ನು ಸಂಗ್ರಹ ಮಾಡಿದವರಿಗೆ ನವದೆಹಲಿ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದಿಂದ ಪ್ರಶಸ್ತಿ ನೀಡಲಾಗುವುದು’ ಎಂದರು.
ಕೃಷಿ ಕೇಂದ್ರದ ಮುಖ್ಯಸ್ಥೆ ಡಾ.ಸರೋಜನಿ ಕರಕಣ್ಣವರ, ಜಿಲ್ಲಾ ದೇಶಿ ಕೃಷಿಕರ ಬಳಗದ ಅಧ್ಯಕ್ಷ ಚನ್ನಬಸಪ್ಪ ಕೋಂಬಳಿ ಮಾತನಾಡಿದರು.
ಡಾ.ವೈ.ಬಿ.ಪಲ್ಲೇದ, ಡಾ.ಕಾವೇರಿ ಬಿರಾದಾರ, ಡಾ.ಜಿ. ಶಾಂತಕುಮಾರ, ಡಾ.ಎಲ್.ಮಂಜುನಾಥ, ಭಗವಾನ, ಡಾ.ಅಶೋಕ ಪಿ, ಡಾ.ಯಶಸ್ವಿನಿ ಶರ್ಮಾ, ಗೀತಾ.ಎಸ್.ತಾಮಗಳೆ, ಡಾ.ಎಸ್.ಎ.ಅಷ್ಟಪುತ್ರೆ ಮತ್ತಿತರರು ಇದ್ದರು.