ಮುಂಡಗೋಡ: ತಾಲ್ಲೂಕಿನ ಕರಗಿನ ಕೊಪ್ಪ ಗ್ರಾಮದ ಹಿಂಬದಿಯ ಅರಣ್ಯ ಪ್ರದೇಶದಲ್ಲಿ ಬೆಂಕಿ ಹತ್ತಿ ಉರಿದು, ಹತ್ತಾರು ಎಕರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದ ಘಟನೆ ಗುರುವಾರ ಜರುಗಿದೆ.
ಅರಣ್ಯ ಪ್ರದೇಶದಲ್ಲಿ ವ್ಯಾಪಕವಾಗಿ ಬೆಂಕಿ ವ್ಯಾಪಿಸಿದೆ. ಅರಣ್ಯ ಪ್ರದೇಶದಲ್ಲಿರುವ ಕೆರೆ, ಕಟ್ಟೆಗಳು ಬತ್ತಿ ಹೋಗಿದ್ದು, ಅರಣ್ಯ ಪ್ರದೇಶ ಸಂಪೂರ್ಣವಾಗಿ ಒಣಗಿದೆ. ರಾಶಿ ರಾಶಿಯಾಗಿ ಬಿದ್ದಿರುವ ಎಲೆಗಳು ಬೆಂಕಿಯ ವೇಗವನ್ನು ಹೆಚ್ಚಿಸಲು ಸಹಕಾರಿಯಾಗಿವೆ. ಬೀಸುತ್ತಿರುವ ಗಾಳಿ ಹಾಗೂ ಒಣಗಿದ ಎಲೆಗಳು ಬೆಂಕಿಯ ವ್ಯಾಪ್ತಿಯನ್ನು ವಿಸ್ತಾರಗೊಳ್ಳುವಂತೆ ಮಾಡಿದೆ.
ಅರಣ್ಯ ಪ್ರದೇಶ ಸನಿಹದ ರೈತರು ತಮ್ಮ ಹೊಲಗದ್ದೆಗಳಿಗೆ ಬೆಂಕಿ ವ್ಯಾಪಿಸದಂತೆ ಹಸಿ ಟೊಂಗೆಗಳನ್ನು ತೆಗೆದುಕೊಂಡು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರಲು ಹರಸಾಹಸಪಟ್ಟು, ಸ್ಥಳಕ್ಕೆ ಬಂದರೂ ಸಹಿತ, ಬೆಂಕಿಯ ವ್ಯಾಪ್ತಿ ಹೆಚ್ಚುತ್ತಾ ಹೋಗಿದ್ದರಿಂದ ಅಂಚಿನಲ್ಲಿದ್ದ ಬೆಂಕಿಯನ್ನು ಮಾತ್ರ ನಿಯಂತ್ರಿಸಲು ಸಾಧ್ಯವಾಯಿತು. ಅರಣ್ಯ ಪ್ರದೇಶದ ಒಳಗೆ ಬೆಂಕಿಯ ಧಗೆ ಉರಿಯತೊಡಗಿತ್ತು. ಇಷ್ಟಾದರೂ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿ ಕಾಣಿಸಲಿಲ್ಲ.
ಸ್ಥಳೀಯರು ಹೇಳುವಂತೆ ಬೆಳಗಿನ ಜಾವದಿಂದಲೇ ಅರಣ್ಯ ಪ್ರದೇಶದ ಒಳಗೆ ಬೆಂಕಿ ಹತ್ತಿಕೊಂಡಿದೆ. ಮಧ್ಯಾಹ್ನದ ಹೊತ್ತಿಗೆ ಅರಣ್ಯದಂಚಿನ ಹೊಲಗದ್ದೆಗಳತ್ತ ಬೆಂಕಿ ಕಾಣಿಸಿಕೊಂಡಾಗ, ಅಗ್ನಿಶಾಮಕ ದಳಕ್ಕೆ ಕರೆ ಮಾಡಲಾಯಿತು ಎಂದರು.