ಎಚ್.ಡಿ.ಕೋಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಕಾಡೆಮ್ಮೆ ಯೊಂದಿಗೆ ನಡೆದ ಕಾದಾಟದಲ್ಲಿ ಏಳು ವರ್ಷದ ಹುಲಿಯೊಂದು ಗಾಯಗೊಂಡಿ ರುವ ಘಟನೆ ಗುರುವಾರ ಬೆಳಕಿಗೆ ಬಂದಿದೆ.
ಗಾಯಗೊಂಡಿದ್ದ ಹುಲಿಯನ್ನು ಮೊಳೆಯೂರು ಅರಣ್ಯ ವಲಯದ ಎಂ.ಸಿ.ತಳಲು ಬೀಟ್ನ ನುಗು ಜಲಾಶಯದ ಹಿನ್ನೀರಿನಲ್ಲಿ ಆರ್ಎಫ್ಒ ಹರೀಶ್ ಗಮನಿಸಿ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ತೆರಳಿದ ಎಸಿಎಫ್ ಪರಮೇಶ್ ಮತ್ತು ಪಶುವೈದ್ಯ ಡಾ.ನಾಗರಾಜು ನೀರಿನಲ್ಲಿದ್ದ ಹುಲಿಗೆ ಅರಿವಳಿಕೆ ಮದ್ದನ್ನು ನೀಡಿ, ಪರೀಕ್ಷಿಸಿದಾಗ ಮುಂದಿನ ಬಲಗಾಲಿನ ಮೂಳೆ ಮುರಿದಿರುವುದು ದೃಢಪಟ್ಟಿದೆ. ‘ಪ್ರಥಮ ಚಿಕಿತ್ಸೆ ನೀಡಿ ಮೈಸೂರಿಗೆ ಕಳುಹಿಸಲಾಗಿದೆ. ಅಲ್ಲಿಂದ ಬನ್ನೇರುಘಟ್ಟಕ್ಕೆ ಸಾಗಿಸಲಾಗುವುದು’ ಎಂದು ಪಶುವೈದ್ಯ ಡಾ.ನಾಗರಾಜು ತಿಳಿಸಿದರು
ಆನೆ ಕಳೆಬರ ಪತ್ತೆ: ಹೆಡಿಯಾಲ ಅರಣ್ಯ ವಲಯದಲ್ಲಿ 25 ವರ್ಷದ ಹೆಣ್ಣಾನೆ ಮೂರು ದಿನಗಳ ಹಿಂದೆ ಮೃತಪಟ್ಟಿದೆ.
ಗಸ್ತಿನಲ್ಲಿದ್ದ ಸಿಬ್ಬಂದಿ ಗುರುವಾರ ಬೆಳಿಗ್ಗೆ ಆನೆ ಕಳೆಬರವನ್ನು ನೋಡಿ, ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆರ್ಎಫ್ಓ ಪರಮೇಶ್ ಮತ್ತು ವೈದ್ಯ ನಾಗರಾಜು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಕಳೆಬರವನ್ನು ಸುಡಲಾಯಿತು.