ಶ್ರೀರಂಗಪಟ್ಟಣ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಇಂಥ ಸಂದರ್ಭದಲ್ಲಿ ತಾಲ್ಲೂಕಿನ ಕೂಡಲಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗ್ರಾಮಸ್ಥರು ಕುರ್ಚಿ, ಟೇಬಲ್, ವಿದ್ಯಾರ್ಥಿಗಳಿಗೆ ಉಡುಪು ಇತರ ಪರಿಕರಗಳನ್ನು ಉದಾರವಾಗಿ ನೀಡುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ.
ಗ್ರಾಮದ ಮರಿಯಪ್ಪ, ಪ್ರಭಾ ಮಹೇಶ್, ರುಕ್ಮಿಣಮ್ಮ, ಲೋಕೇಶ್, ಮಂಜುನಾಥ್ ಮತ್ತು ಪಕ್ಕದ ಗ್ರಾಮದ ನೆಲಮನೆ ಮರಿಸ್ವಾಮಿಗೌಡ ಅವರು ಶಾಲೆಗೆ 3 ರೌಂಡ್ ಟೇಬಲ್ಗಳು, 31 ಕುರ್ಚಿಗಳು, ಒಂದು ಪೋಡಿಯಂ, 59 ವಿದ್ಯಾರ್ಥಿಗಳಿಗೂ ವಸ್ತ್ರ (ಟಿ–ಶರ್ಟ್) ಇತರ ಪರಿಕರಗಳನ್ನು ನೀಡಿದ್ದಾರೆ. ಶಾಲೆಯ ಗ್ರಂಥಾಲಯಕ್ಕೆ 200 ಪುಸ್ತಕಗಳು ಹಾಗೂ ಅವುಗಳನ್ನು ಜೋಡಿಸಲು 2 ರ್್ಯಾಕ್ಗಳನ್ನು ಕೊಡಿಸುವುದಾಗಿ ಎಲ್ಐಸಿ ಪಾಂಡವಪುರ ಶಾಖೆಯ ವ್ಯವಸ್ಥಾಪಕ ಹರೀಶ್ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಘೋಷಿಸಿದರು.
ಎಲ್ಐಸಿ ವತಿಯಿಂದ ಕೂಡಲಕುಪ್ಪೆ ಸರ್ಕಾರಿ ಶಾಲೆಯನ್ನು ವಿಮಾ ಶಾಲೆಯಾಗಿ ಆಯ್ಕೆ ಮಾಡಿಕೊಂಡು ಎಲ್ಲ ವಿದ್ಯಾರ್ಥಿಗಳಿಗೂ ವಿಮೆ ಮಾಡಿಸಲಾಗುವುದು ಎಂದು ಪಾಂಡವಪುರ ಎಲ್ಐಸಿ ಅಭಿವೃದ್ಧಿ ಅಧಿಕಾರಿ ಬೆಟ್ಟೇಗೌಡ ತಿಳಿಸಿದರು.
ಕೂಡಲಕುಪ್ಪೆ ಸರ್ಕಾರಿ ಶಾಲೆಗೆ ವಿವಿಧ ಪರಿಕರಗಳನ್ನು ಕೊಡುಗೆ ನೀಡಿದ ದಾನಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ಹೊನ್ನರಾಜು ಶಾಲೆಯಲ್ಲಿ ಗುರುವಾರ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಅಭಿನಂದಿಸಿದರು.
ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಗೌರವ ಬರುವಂತೆ ಶಿಕ್ಷಕರು ನಡೆದುಕೊಳ್ಳಬೇಕು. ಶಿಸ್ತು, ಸಮಯಪಾಲನೆ, ಪರಿಣಾಮಕಾರಿ ಕಲಿಕೆಗೆ ಒತ್ತು ನೀಡಬೇಕು ಎಂದು ಅವರು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದಲಿಂಗು ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಬೇಕು. ನೇತಾರರ ಜೀವನ ಚರಿತ್ರೆಯನ್ನು ಮನನ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಮುಖ್ಯಶಿಕ್ಷಕ ಶಾಂತಕುಮಾರ್, ಕಸಾಪ ತಾಲ್ಲೂಕು ಘಟಕದ ಗೌರವ ಕಾರ್ಯದರ್ಶಿ ಸಿ.ಬಿ. ಉಮಾಶಂಕರ್, ನಗರ ಘಟಕದ ಅಧ್ಯಕ್ಷ ಕೆ.ಬಿ. ಬಸವರಾಜು, ಸುಮಿತ್ರಮ್ಮ, ರುಕ್ಮಿಣಿ, ರಮಾಮಣಿ ಇತರರು ಇದ್ದರು.