ಚಿಕ್ಕಬಳ್ಳಾಪುರ: ತಾಲ್ಲೂಕಿನ ಮುದ್ದೇನಹಳ್ಳಿಯಲ್ಲಿರುವ ಸತ್ಯಸಾಯಿ ಗ್ರಾಮದಲ್ಲಿ ಸತ್ಯಸಾಯಿ ಲೋಕಸೇವಾ ಸಮೂಹ ಶಿಕ್ಷಣ ಸಂಸ್ಥೆ ವತಿಯಿಂದ ಜನವರಿ 15 ರಿಂದ 19ರ ವರೆಗೆ 43ನೇ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಮೇಳ ಆಯೋಜಿಸಲಾಗಿದೆ.
‘ಜೀವನ ಒಂದು ಕ್ರೀಡೆ, ಉತ್ಸಾಹದಿಂದ ಭಾಗವಹಿಸಿ’ ಎಂಬ ಧ್ಯೇಯ ವಾಕ್ಯ ಹೊಂದಿರುವ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಮೇಳದಲ್ಲಿ ಸತ್ಯಸಾಯಿ ಲೋಕಸೇವಾ ಸಮೂಹ ಶಿಕ್ಷಣ ಸಂಸ್ಥೆಯ 12 ಪ್ರೌಢಶಾಲೆಗಳಿಂದ ಸುಮಾರು 3,000 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರು ಜ.15 ರಂದು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಕ್ರೀಡಾ ಹಾಗೂ ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್, ಶಾಸಕ ಡಾ.ಕೆ.ಸುಧಾಕರ್, ಭಾರತೀಯ ಹಾಕಿ ತಂಡದ ಮಾಜಿ ನಾಯಕ ಜೂಡ್ ಫಿಲಿಕ್ಸ್ ಹಾಗೂ ಶೂಟರ್ ರಂಜನ್ ಸೋಧಿ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಮೋಟಾರ್ ಸೈಕಲ್ ಸಾಹಸ, ಕುದುರೆ ಸವಾರಿ, ಸ್ಕೇಟ್ ಬೋರ್ಡ್ ನಡಿಗೆ, 90 ಅಡಿಗಳ ಎತ್ತರದಿಂದ ಬಿಸಿಗಾಳಿ ಬಲೂನ್ನಿಂದ ಇಳಿಯುವ ಸಾಹಸ, ಪ್ಯಾರಾಮೋಟರ್ ಯಾನ ಸೇರಿದಂತೆ ವಿವಿಧ ಬಗೆಯ ಸಾಹಸ ಕ್ರೀಡೆಗಳನ್ನು ಪ್ರದರ್ಶಿಸಲಿದ್ದಾರೆ.
ಸಿಂಗಪುರ ಮತ್ತು ಮಲೇಷಿಯಾದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಿಂಹ ನೃತ್ಯ, ಕಲಬುರ್ಗಿ ವಿದ್ಯಾರ್ಥಿಗಳಿಂದ ‘ಜಾಂಜ್ ಪಥಕ್’ ಜಾನಪದ ನೃತ್ಯ, ಮಂಡ್ಯದ ವಿದ್ಯಾರ್ಥಿಗಳು ಜರ್ಮನ್ ವ್ಹೀಲ್, ಟ್ರಾಂಪೋಲಿನ್, ಸರ್ವಧರ್ಮ ಸಮನ್ವಯ ತತ್ವವನ್ನು ಪ್ರತಿಬಿಂಬಿಸುವ ಮಾನವ ಪಿರಮಿಡ್ಡುಗಳನ್ನು ಪ್ರದರ್ಶನ, ಜಯಪುರ ಪ್ರೌಢಶಾಲೆಯ ಬಾಲಕರು ವೈವಿಧ್ಯಮ ಯವಾಗಿ ಬಾಸ್ಕೆಟ್ ಬಾಲ್ ಮತ್ತು ಸ್ಕೇಟಿಂಗ್ ಪ್ರದರ್ಶಿಸಲಿದ್ದು, ಬಾಲಕಿಯರು ‘ಕಾಳಿಂಗ ಮರ್ದನ’ ನೃತ್ಯಾಭಿನಯ, ಚಿಕ್ಕಬಳ್ಳಾಪುರ ಪ್ರೌಢಶಾಲೆ ವಿದ್ಯಾರ್ಥಿಗಳು ಗಣೇಶ ನೃತ್ಯ ಪ್ರದರ್ಶಿಸಲಿದ್ದಾರೆ.
ಜ. 15ರಿಂದ ಪ್ರತಿದಿನ ಸಂಜೆ ಸತ್ಯಸಾಯಿ ಪ್ರೇಮಾಮೃತಂ ಸಭಾಂಗಣದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 15ರಂದು ಹೈದರಾಬಾದ್ ಸತ್ಯಸಾಯಿ ವಿದ್ಯಾ ಮಂದಿರದ ವಿದ್ಯಾರ್ಥಿನಿಯರಿಂದ ‘ಸತ್ಯಸಾಯಿ ಅಷ್ಟೋತ್ತರ ನೃತ್ಯ ಮಾಲಿಕಾ’, ಜ.16 ರಂದು ಸತ್ಯಸಾಯಿ ಮಾನವ ಅಭ್ಯುದಯ ಕೇಂದ್ರದ ವಿದ್ಯಾರ್ಥಿಗಳಿಂದ ‘ಸೂಕ್ಷ್ಮ ಸತ್ಯಸಾಯಿ’ ನಾಟಕ, , ಜ. 17ರಂದು ಮುದ್ದೇನಹಳ್ಳಿ ವಿದ್ಯಾರ್ಥಿಗಳಿಂದ ಬಡಗುತಿಟ್ಟಿನ ಯಕ್ಷಗಾನ ‘ಅಭಿಮನ್ಯು ಕಾಳಗ’, ಜ.18ರಂದು ಮುದ್ದೇನಹಳ್ಳಿ 40 ವಿದ್ಯಾರ್ಥಿಗಳಿಂದ ವಿದೇಶಿ ವಾದ್ಯಗಳ ವಾದನವುಳ್ಳ ಸಂಗೀತ ಗೋಷ್ಠಿ.
ಜ. 19ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಮತ್ತು ಪಾರಿತೋಷಕಗಳನ್ನು ಪ್ರದಾನ ಮಾಡಲಾಗುತ್ತದೆ.