ಮಂಗಳೂರು: ಮೌಲ್ಯವರ್ಧಿತ ತೆರಿಗೆ, ಮನರಂಜನಾ ತೆರಿಗೆ, ವಿಲಾಸ ತೆರಿಗೆಯಡಿ ನೋಂದಾಯಿತ ಎಲ್ಲ ವರ್ತಕರು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಡಿ ಇದೇ 15ರೊಳಗೆ ದಾಖಲಾತಿ ಮಾಡಿಕೊಳ್ಳಬೇಕು ಎಂದು ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತ ಎಚ್.ಜಿ. ಪವಿತ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 1ರಂದು ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಇದೇ 15 ಕೊನೆಯ ದಿನವಾಗಿದೆ. ಈವರೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಶೇ 60ರಷ್ಟು ವರ್ತಕರು ಜಿಎಸ್ಟಿ ಆನ್ಲೈನ್ ದಾಖಲಾತಿ ಜಾಲದ ಅಡಿ ನೋಂದಣಿ ಮಾಡಿರುತ್ತಾರೆ. ಇನ್ನು ಶೇ 40ರಷ್ಟು ನೋಂದಣಿ ಮಾಡಲು ಬಾಕಿ ಇದೆ ಎಂದು ಹೇಳಿದರು.
ರಾಜ್ಯ ತೆರಿಗೆ ಇಲಾಖೆಯು ಇ–ಉಪಕ್ರಮಗಳ ಅನುಷ್ಠಾನ ಮತ್ತು ವಿದ್ಯುನ್ಮಾನ ಸೇವೆಗಳನ್ನು ಒದಗಿಸಿ, ವರ್ತಕರು ಸುಲಲಿತ ವ್ಯಾಪಾರ ಉದ್ದಿಮೆ ಗಳ ನಿರ್ವಹಣೆಗೆ ಅನುವು ಮಾಡಿಕೊ ಟ್ಟಿರುವುದರಲ್ಲಿ ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿದೆ. ಇದಕ್ಕೆ ವರ್ತಕರ ಸ್ಪಂದನೆ ಮತ್ತು ಅನುಸರಣೆಯು ಅಭೂತಪೂರ್ವ ಎಂದು ಹೇಳಿದರು.
ಮಂಗಳೂರು ವಿಭಾಗವು ಜಿಎಸ್ಟಿ ನೋಂದಣಿಯಲ್ಲಿ ಮೊದಲ ಸ್ಥಾನ ಪಡೆದಿದೆ. ಜಿಎಸ್ಟಿಯಡಿಯಲ್ಲಿ ನೋಂದಣಿ ಮಾಡುವ ವರ್ತಕರು ನಮ್ಮ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಅಲ್ಲದೆ ಇನ್ನೂ 3 ದಿನ ಬಾಕಿ ಇರುವುದರಿಂದ ದಿನದ 24 ಗಂಟೆ ಉಚಿತ ಸೇವೆ ನೀಡಲಾಗುವುದು. ತ್ವರಿತ ನೋಂದಣಿಗೆ ಇದು ಸುವರ್ಣ ಅವಕಾಶ ಎಂದು ಹೇಳಿದರು.
ತಾತ್ಕಾಲಿಕ ಐಡಿ ಮತ್ತು ಪಾಸ್ವ ರ್ಡ್ಗಳನ್ನು ಜಾಲತಾಣ http:// vat.kar.nic.in ನಿಂದ ಪಡೆದುಕೊ ಳ್ಳಬಹುದು. ಅಲ್ಲದೆ ಜಿಎಸ್ಟಿಯಡಿ ನೋಂದಣಿ ಪಡೆಯಲು ಪಾನ್ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಅಪ್ಡೇಟ್ ಮಾಡಿಸಿಕೊಳ್ಳಬೆಕು.
ಈ ತಾತ್ಕಾಲಿಕ ಐಡಿ ಮತ್ತು ಪಾಸ್ವರ್ಡ್ಗಳನ್ನು ಉಪಯೋಗಿಸಿ ನಿಗದಿಪಡಿಸಿರುವ ಕಾಲಮಿತಿಯಲ್ಲಿ www.gst.gov.in ಜಾಲತಾಣದಲ್ಲಿ ದಾಖಲಾತಿ ಪ್ರಕ್ರಿಯೆಯಿಂದ ಜಿಎಸ್ಟಿ ವರ್ಗಾವಣೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಲಾಖೆಯ ಅಧಿಕಾರಿಗಳಾದ ಕೃಷ್ಣಕುಮಾರ್, ಶಂಭು ಭಟ್, ನಾಣಿಯಪ್ಪ ಮೊದಲಾದವರು ಇದ್ದರು.
**
ನೋಂದಣಿ ಸಹಾಯವಾಣಿ
ಹೆಚ್ಚಿನ ಮಾಹಿತಿಗಾಗಿ ಬಂದರ್, ಕೆನರಾ ಚೇಂಬರ್ ಆಫ್ ಕಾಮರ್ಸ್, ಡಿವಿಒ/ಎಲ್ವಿಒ/ವಿಎಸ್ಒ/ ಹಾಗೂ ಸ್ಥಳೀಯ ಸಹಾಯ ಕೇಂದ್ರಗಳಿಗೆ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ: 0824–2427070, 0824–2427079 ಅಥವಾ ಇ–ಮೇಲ್:helpdesk @gst.gov.in, ಜಾಲತಾಣ www.gst.gov.in, ಸ್ಥಳೀಯ ಆಯುಕ್ತರ ಮೊಬೈಲ್: 94480 76940, 94482 17515ನ್ನು ಸಂಪರ್ಕಿಸಬಹುದು.