ತಾವರಗೇರಾ: ಸಮೀಪದ ವೈಜನಾಥ ದೇವಾಲಯದ ಎದುರಿನ ಬಾವಿಯಲ್ಲಿ ಹೂಳು ತುಂಬಿದ್ದು, ಕುಡಿಯುವ ನೀರಿಗೆ ತೊಂದರೆಪಡುವಂತಾಗಿದೆ. 40-50 ವರ್ಷಗಳ ಹಿಂದೆ ಈ ಬಾವಿಯಲ್ಲಿನ ಹೂಳು ತೆಗೆಯಲಾಗಿತ್ತು. ಈಗ ಹೂಳು ತುಂಬಿದ್ದು, ಇರುವ ನೀರು ಉಪಯೋಗಕ್ಕೆ ಬಾರದಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.
ಪಟ್ಟಣದ ಸುಮಾರು 30 ತೆರೆದ ಬಾವಿಗಳಿವೆ. ಆದರೆ ಯಾವುದರಲ್ಲಿಯೂ ನೀರಿಲ್ಲ. ಇಲ್ಲಿರುವ ವೈಜನಾಥಭಾವಿ, ನರಸಿಂಹಭಾವಿ, ಹೊಕ್ರಾಣಿ, ಕರಿವೀರಣ್ಣನ ಭಾವಿ,ಮಸ್ಜದ್ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿವೆ. ಪಟ್ಟಣ ಪಂಚಾಯತಿ ಆಡಳಿತ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕು ಎಂದು ಚಂದ್ರಶೇಖರ ಗುರಿಕಾರ ಒತ್ತಾಯಿಸುತ್ತಾರೆ.
ದರ್ಗಾಬಾವಿ, ಕಚೇರಿಬಾವಿ, ಮಠದ ಬಾವಿ, ಮುಲ್ಲಾರ ಬಾವಿಗಳನ್ನೂ ಸ್ವಚ್ಛಗೊಳಿಸಬೇಕು. ಪಟ್ಟಣ ಪಂಚಾಯಿತಿ ನೀರು ಪೂರೈಕೆಗೆ ಕೆಲ ಕೊಳವೆಬಾವಿಗಳಿಗೆ ಹೊಸ ಪಂಪ್ ಹಾಕಿದೆ. ಇಲ್ಲಿರುವ ಬಾವಿಗಳ ಹೂಳೆತ್ತಲು ಮುಂದಾದರೆ ನೀರು ಪೂರೈಕೆಗೆ ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಾರೆ.