ಬೆಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ಅಡುಗೆ ಅನಿಲ (ಎಲ್ಪಿಜಿ) ಪೂರೈಸುವ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಯನ್ನು ಏಸ್ ಪೈಪ್ಲೈನ್ ಕಾಂಟ್ರ್ಯಾಕ್ಟ್ ಪ್ರೈವೇಟ್ ಲಿಮಿಟೆಡ್ ಪೂರ್ಣಗೊಳಿಸಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ನಿನ (ಎಚ್ಪಿಸಿಎಲ್) ಈ ಯೋಜನೆಯಡಿ 358 ಕಿ.ಮೀಗಳಷ್ಟು ಉದ್ದ ಕೊಳವೆಗಳನ್ನು ಅಳವಡಿಸುವ ಕಾಮಗಾರಿಯ ವೆಚ್ಚ
₹ 838 ಕೋಟಿಗಳಷ್ಟಿದೆ.
‘ತೈಲ ಹಾಗೂ ಅನಿಲ ಉದ್ದಿಮೆಯ ಪಾಲಿಗೆ ಇದೊಂದು ವಿಶಿಷ್ಟ ಯೋಜನೆಯಾಗಿತ್ತು. ಪಶ್ಚಿಮ ಘಟ್ಟ, ರಬ್ಬರ್ ಮತ್ತು ಕಾಫಿ ತೋಟಗಳ ಮೂಲಕ ಹಾದು ಹೋಗಿರುವ ಈ ಕೊಳವೆ ಮಾರ್ಗ ಅಳವಡಿಕೆಯು ಸವಾಲಿನ ಕೆಲಸವಾಗಿತ್ತು. ದಾಖಲೆ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಎಲ್ಪಿಜಿ ಪೂರೈಕೆಯು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುವ ಸೌಲಭ್ಯ ಅಳವಡಿಸಲಾಗಿದೆ’ ಎಂದು ಏಸ್ ಪೈಪ್ಲೈನ್ನ ವ್ಯವಸ್ಥಾಪಕ ನಿರ್ದೇಶಕ ಅನೂಪ್ ಸಿಂಗ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇರುವ ಎಲ್ಪಿಜಿ ವಿತರಣಾ ಕೇಂದ್ರದಿಂದ ಪ್ರತಿ ಗಂಟೆಗೆ ಪೂರೈಸುವ ಎಲ್ಪಿಜಿಯು 9 ಟ್ಯಾಂಕರ್ಗಳಿಗೆ ಸಮನಾಗಿದೆ. ಇದರಿಂದ ಹೆದ್ದಾರಿಯಲ್ಲಿ ಎಲ್ಪಿಜಿ ಟ್ಯಾಂಕರ್ಗಳ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.