ರಾಜ್ಯದ ಗ್ರಾಮಾಂತರ ಪ್ರದೇಶಗಳ ಜನರ ಅಗತ್ಯವನ್ನು ರಾಜ್ಯ ಸರ್ಕಾರ ಸರಿಯಾಗಿ ಗುರುತಿಸಿದೆ. ಹಾಗಾಗಿ ಆಯುಷ್ ವೈದ್ಯರಿಗೂ ಅಲೋಪಥಿ ಔಷಧಗಳನ್ನು ಉಪಯೋಗಿಸಲು ಅನುಮತಿ ನೀಡುವುದರ ಮೂಲಕ ಗ್ರಾಮೀಣ ಭಾಗದ ರೋಗಿಗಳಿಗೆ ಅವಶ್ಯಕ ಆರೋಗ್ಯ ಸೇವೆ ಒದಗಿಸಲು ಅಣಿಯಾಗಿದೆ.
ಇದು ಗ್ರಾಮೀಣ ನಿವಾಸಿಗಳಿಗೆ ಹಾಗೂ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಮಹದುಪಕಾರದಂತೆ ಇದೆ. ನಗರವಾಸಿಗಳಿಗೆ ಮಾತ್ರ ಸಿಗುತ್ತಿದ್ದ ಸೌಲಭ್ಯಗಳು ಕುಗ್ರಾಮದವರಿಗೂ ಸಿಗುವಂತಾಗಲಿದೆ. ಆಯುಷ್ ವೈದ್ಯಾಧಿಕಾರಿಯಾಗಿ ನನ್ನ ಸೇವಾ ಅವಧಿಯ ಬಹುದೊಡ್ಡ ಭಾಗವನ್ನು ಗ್ರಾಮೀಣ ಪ್ರದೇಶಗಳಲ್ಲಿ ಪೂರೈಸಿದ ನನಗೆ ಸರ್ಕಾರದ ಈ ಕ್ರಮ ಸಮಾಧಾನ, ಸಂತೋಷ ಕೊಟ್ಟಿದೆ.
ಅಲೋಪಥಿ ವೈದ್ಯಪದ್ಧತಿಯನ್ನು ಉಪಯೋಗಿಸಲು ಅನುಮತಿ ಪಡೆಯುವ ಆಯುಷ್ ವೈದ್ಯರ ಜವಾಬ್ದಾರಿ ಹೆಚ್ಚಲಿದೆ ಎಂಬುದನ್ನು ವೈದ್ಯರೂ ಅರಿಯಬೇಕು. ಅಲೋಪಥಿ ಔಷಧಗಳನ್ನು ಎಗ್ಗಿಲ್ಲದೆ ಉಪಯೋಗಿಸಿ, ತಾವು ಕಲಿತ ಮೂಲ ವೈದ್ಯಶಾಸ್ತ್ರಕ್ಕೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಹೊಸ ವ್ಯವಸ್ಥೆ ವಿರೋಧಿಸುವವರ ಎದುರು ನಗೆಪಾಟಲಿಗೆ ಈಡಾಗಬಾರದು.
-ಡಾ. ಈಶ್ವರ ಶಾಸ್ತ್ರಿ ಮೋಟಿನಸರ, ಶಿರಸಿ