ಶಿವಮೊಗ್ಗ: ‘ರಾಜ್ಯ, ರಾಷ್ಟ್ರಮಟ್ಟದ ಉತ್ಸವಗಳು ನಡೆಯುತ್ತಿದ್ದರೂ, ಅದರ ಪೂರ್ಣ ಪ್ರಮಾಣದ ಪ್ರತಿಫಲ ಜನರಿಗೆ ತಲುಪುತ್ತಿಲ್ಲ’ ಎಂದು ರಂಗಕರ್ಮಿ ಕೆ.ವಿ. ಅಕ್ಷರ ವಿಷಾದ ವ್ಯಕ್ತಪಡಿಸಿದರು.
ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಶಿವಮೊಗ್ಗ ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಉತ್ಸವಗಳ ಉದ್ದೇಶವಾದ ಕಲೆ, ಸಂಸ್ಕೃತಿಯ ಅಭಿವ್ಯಕ್ತಿ ಸಮಾಜದ ಒಳಿತಿಗಾಗಿ ಆಯೋಜಿಸುತ್ತಿದ್ದರೂ, ಸಾರ್ವಜನಿಕರ ಮನಸ್ಸಿಗೆ ತಲುಪಲು ಸಾಧ್ಯವಾಗುತ್ತಿಲ್ಲ. ಜನರನ್ನು ಸೆಳೆಯಲು ವಿಭಿನ್ನ ಪ್ರಯತ್ನ ಹಾಗೂ ವಿನೂತನ ತಂತ್ರ ಅಳವಡಿಸಿಕೊಳ್ಳುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.
ಉತ್ಸವದ ಮೊದಲ ನಾಟಕವಾಗಿ ಕೇರಳದ ಸೋಪಾನಂ ತಂಡದಿಂದ ರಂಗ ನಿರ್ದೇಶಕ ಕಾವಲಂ ನಾರಾಯಣ ಫಣಿಕ್ಕರ್ ನಿರ್ದೇಶನದ, ಭಾಸ ಮಹಾಕವಿಯ ಸಂಸ್ಕೃತ ನಾಟಕ ‘ಮಧ್ಯಮ ವ್ಯಾಯೋಗಂ’ ಪ್ರದರ್ಶನ ಏರ್ಪಡಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂಗಲಾ ವೆಂ.ನಾಯಕ್, ಎಂ.ಬಿ. ಭಾನುಪ್ರಕಾಶ್, ಕಲ್ಯಾಣಿ ಕೃಷ್ಣನ್, ಬಲವಂತರಾವ್ ಪಾಟೀಲ್, ಸಾಸ್ವೆಹಳ್ಳಿ ಸತೀಶ್, ಹೊನ್ನಾಳಿ ಚಂದ್ರಶೇಖರ್ ಇತರರು ಇದ್ದರು.