ಕೆ.ಆರ್.ಪೇಟೆ.: ತಾಲ್ಲೂಕಿನ ಬಿಲ್ಲೇನಹಳ್ಳಿ ಗ್ರಾಮದಲ್ಲಿ ಶ್ರೀ ಗವಿರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವವು ಭಾನುವಾರ ವಿಜೃಂಭಣೆಯಿಂದ ನಡೆಯಿತು.
ಶಾಸಕ ಕೆ.ಸಿ.ನಾರಾಯಣಗೌಡ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿ ಕೆ.ರತ್ನಾ ರಥಕ್ಕೆ ವಿಶೇಷ ಪೂಜೆಯನ್ನು ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಪೂಜೆಸಲ್ಲಿಸಿ ಬಾಳೆಹಣ್ಣು, ಹೂವು ಮತ್ತು ಜವನ ಎಸೆದು ಭಕ್ತಿಭಾವವನ್ನು ಸಮರ್ಪಿಸಿ, ದೇವರ ದರ್ಶನ ಪಡೆದರು.
ದನಗಳ ಜಾತ್ರೆ: ದನಗಳ ಮೆರವಣಿಗೆ, ತಂಬಿಟ್ಟಿನ ಆರತಿ , ಉತ್ಸವಮೂರ್ತಿ ಮೆರವಣಿಗೆ ಜಾತ್ರೆಗೆ ರಂಗು ತಂದಿತು. ಅಸಂಖ್ಯ ಭಕ್ತರು ‘ಉಘೇ ರಂಗನಾಥ, ಉಘೇ ಗವಿರಂಗಪ್ಪ’ ಜಯಘೋಷದ ರಥೋತ್ಸವದ ತೇರು ಎಳೆದರು.
ಪೂಜಾ ಕುಣಿತ, ಪಟ ಕುಣಿತ, ಬೊಂಬೆ ಕುಣಿತ, ಕೋಲಾಟ ಮತ್ತಿತರರ ಜನಪದ ನೃತ್ಯವು ರಥೋತ್ಸವದ ರಂಗು ಹೆಚ್ಚಿಸಿತ್ತು. ಉದ್ಯಾನ ಉದ್ಘಾಟನೆ: ಶಾಸಕ ನಾರಾಯಣಗೌಡ, ತಾ.ಪಂ.ಸದಸ್ಯ ಬಿ.ಎನ್.ದಿನೇಶ್ ಕುಟುಂಬ ನಿರ್ಮಿಸಿರುವ ಉದ್ಯಾನ ಲೋಕಾರ್ಪಣೆಗೊಳಿಸಿದರು.
ಜಿ.ಪಂ.ಅಧ್ಯಕ್ಷೆ ಪ್ರೇಮಕುಮಾರಿ, ತಾ.ಪಂ ಉಪಾಧ್ಯಕ್ಷ ಜಾನಕೀರಾಂ, ತಾ.ಪಂ ಸದಸ್ಯ ರಾಜಾಹುಲಿ ದಿನೇಶ್, ಮನ್ಮುಲ್ ನಿರ್ದೇಶಕ ಡಾಲುರವಿ, ರಾಜಸ್ವ ನಿರೀಕ್ಷಕ ರಾಮಚಂದ್ರು, ಪ್ರಧಾನ ಅರ್ಚಕ ಸಂಪತ್ ಕುಮಾರ್ ಇದ್ದರು.