ಹಾಸನ: ಪ್ರಾಮಾಣಿಕ ನಡವಳಿಕೆಯಿಂದ ಶ್ರದ್ಧೆ, ನಿರಂತರ ಪ್ರಯತ್ನ ಹಾಗೂ ನಿಷ್ಕಲ್ಮಶ ಮನಸ್ಸಿನಿಂದ ಇರುವ ವ್ಯಕ್ತಿ ಉನ್ನತ ಸ್ಥಾನಕ್ಕೇರುವುದು ಖಚಿತ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮುಖ್ಯ ಆಯುಕ್ತ ವೈ.ಎಸ್.ವೀರಭದ್ರಪ್ಪ ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಅಂಗವಾಗಿ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಭವನದಲ್ಲಿ ವಿವೇಕ ಜಾಗೃತ ಬಳಗ, ಲಯನ್ಸ್ ಕ್ಲಬ್ ಹಾಗೂ ಲಯನೆಸ್, ಏಕಲವ್ಯ ರೋವರ್ಸ್ ಮುಕ್ತದಳ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಯುವಶಕ್ತ ಕರ್ತವ್ಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಸಮಯ ಪರಿಪಾಲನೆ ಎಲ್ಲದಕ್ಕೂ ಮುಖ್ಯವಾಗುತ್ತದೆ ಎಂದು ಹೇಳಿದರು.
ರಾಮನಾಥಪುರದ ಸಾದಿಕ್ ಸಾಬ್ ಮಾತನಾಡಿ, ಮಕ್ಕಳು ಮಾನವೀಯ ಮೌಲ್ಯವಂತರಾಗಿ ಕಂಗೊಳಿಸಬೇಕೆಂದರೆ ಪೋಷಕ ಹಾಗೂ ಶಿಕ್ಷಕರ ಪಾತ್ರ ಅಧಿಕವಾಗಿರುತ್ತದೆ. ಯುವಕರು ಅಪರಾಧ ಪ್ರಕರಣಗಳಲ್ಲಿ ಕಾಣಿಸಿ ಕೊಳ್ಳುತ್ತಿರುವುದು ಸಾಂಸ್ಕೃತಿಕ ಮೌಲ್ಯದ ಪತನವೇ ಕಾರಣ ಎಂದರು.
ಲಯನೆಸ್ ಅಧ್ಯಕ್ಷೆ ಜಯಾ ರಮೇಶ್ ಮಾತನಾಡಿ, ಯುವಕರು ನಿಸ್ವಾರ್ಥರಾಗಿ ಸಮುದಾಯಕ್ಕೆ ಸೇವೆಯ ಮೂಲಕ ದಾರಿದೀಪವಾಗಬೇಕು ಎಂದರು.
ಸ್ಕೌಟ್ಸ್ ಆಯುಕ್ತ ಪ್ರಕಾಶ್ ಎಸ್. ಯಾಜಿ ಮಾತನಾಡಿ, ಪ್ರಪಂಚದ ಯಾವುದೇ ದೇಶದಲ್ಲೂ ಕಾಣದ ಯುವಶಕ್ತಿ ನಮ್ಮಲ್ಲಿದ್ದು, ಅವರನ್ನು ಮಾನವಿಯ ಮೌಲ್ಯ ಹಾಗೂ ಸಚ್ಛಾರಿತ್ರ್ಯವಂತರಾಗಿ ಮಾಡಿದರೆ ಭವ್ಯ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಅನಂತ್ರಾಜ್ ಅಧ್ಯಕ್ಷತೆ ವಹಿಸಿದ್ದರು. ಜಾವಿದ್ಖಾನ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಿ.ಎಸ್. ಶಿವಸ್ವಾಮಿ, ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಪುರುಷೊೋತ್ತಮ್, ಕಾಂಚನಮಾಲ ಇದ್ದರು.