ಹುಬ್ಬಳ್ಳಿ: ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಜಿಲ್ಲೆಯಲ್ಲಿ ಭಾನುವಾರ ಸುಸೂತ್ರವಾಗಿ ಜರುಗಿತು. ಒಟ್ಟು 12, 724 ಅಭ್ಯರ್ಥಿಗಳು ಪರೀಕ್ಷೆ ಬರೆದರು.
ಬೆಳಿಗ್ಗೆ, ಪ್ರಥಮ ಪತ್ರಿಕೆ (ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ )ಯನ್ನು ಅಭ್ಯರ್ಥಿಗಳು ಬರೆದರು. ಧಾರವಾಡದ ಆರು, ಹುಬ್ಬಳ್ಳಿಯ ಐದು ಕೇಂದ್ರಗಳಲ್ಲಿ 4,192 ಅಭ್ಯರ್ಥಿಗಳು ಈ ಪತ್ರಿಕೆಗೆ ಉತ್ತರ ಬರೆದರು. 258 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.
ಎರಡನೇ ಪತ್ರಿಕೆ (ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ) ಪರೀಕ್ಷೆ ಮಧ್ಯಾಹ್ನ ನಡೆಯಿತು. ಧಾರವಾಡದಲ್ಲಿ 14 ಕೇಂದ್ರಗಳು, ಹುಬ್ಬಳ್ಳಿಯ 9 ಕೇಂದ್ರಗಳಲ್ಲಿ ಒಟ್ಟು 7,730 ಅಭ್ಯರ್ಥಿಗಳು ಈ ಪತ್ರಿಕೆಯ ಪರೀಕ್ಷೆ ಬರೆದರು. 544 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.
‘ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಜಿಲ್ಲಾ ಖಜಾನೆಯಿಂದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವಾಗ ಹಾಗೂ ಪರೀಕ್ಷಾ ಕೇಂದ್ರಗಳಿಂದ ಉತ್ತರ ಪತ್ರಿಕೆಗಳನ್ನು ಖಜಾನೆಯಲ್ಲಿ ಇಡುವ ಮತ್ತು ಪರಿಕ್ಷೆಯ ಎಲ್ಲ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಲಾಗಿದೆ’ ಎಂದು ಡಿಡಿಪಿಐ ಎನ್.ಎಚ್. ನಾಗೂರ ‘ಪ್ರಜಾವಾಣಿ’ಗೆ ತಿಳಿಸಿದರು.
ಪತ್ರಿಕೆ ಕಠಿಣ: ‘ಮೂರನೇ ಬಾರಿ ಟಿಇಟಿ ಬರೆಯುತ್ತಿದ್ದೇನೆ. ಕಳೆದ ಎರಡು ವರ್ಷದ ಪ್ರಶ್ನೆಪತ್ರಿಕೆಗೆ ಹೋಲಿಸಿದರೆ, ಈ ಬಾರಿಯ ಪತ್ರಿಕೆ ಕಠಿಣವಾಗಿತ್ತು. ಸರಿಯಾಗಿ ಓದದವರಿಗೆ ಗೊಂದಲ ಉಂಟು ಮಾಡುವ ರೀತಿಯಲ್ಲಿ ಪ್ರಶ್ನೆಗಳಿದ್ದವು. ಆಳವಾಗಿ ಅಧ್ಯಯನ ಮಾಡಿದವರು ಉತ್ತರಿಸಬಹುದಿತ್ತು’ ಎಂದು ಅಭ್ಯರ್ಥಿ ಗದುಗಿನ ದೇವನಗೌಡ ಪಾಟೀಲ ಹೇಳಿದರು.
‘ಎರಡೂ ಬಾರಿಯೂ ನಾನು ಟಿಇಟಿಯಲ್ಲಿ ಉತ್ತೀರ್ಣನಾಗಿದ್ದೇನೆ. ಆದರೆ, ನನ್ನ ಅಂಕಗಳನ್ನು ಉತ್ತಮಪಡಿಸಿಕೊಳ್ಳಬೇಕು ಎಂಬ ಕಾರಣದಿಂದ ಈ ಬಾರಿಯೂ ಪರೀಕ್ಷೆ ಬರೆದೆ’ ಎಂದು ಅವರು ಹೇಳಿದರು.
ಇತಿಹಾಸ ಕುರಿತ ಪ್ರಶ್ನೆಗಳೂ ಕ್ಲಿಷ್ಟಕರವಾಗಿದ್ದವು. ಬೋಧನಾ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳೂ ಗೊಂದಲ ಮೂಡಿಸುವಂತಿದ್ದವು. ಪ್ರಶ್ನೆಗೆ ನೀಡಿದ್ದ ನಾಲ್ಕೂ ಆಯ್ಕೆಗಳಲ್ಲಿ ಎಲ್ಲವೂ ಸರಿ ಉತ್ತರ ಎನಿಸುತ್ತಿದ್ದವು ಎಂದು ಅಭ್ಯರ್ಥಿ ಬಸವರಾಜ ಸುಣಗಾರ ಹೇಳಿದರು.