ವಿಜಯಪುರ: ಸರ್ಕಾರದಿಂದ ಬರುವ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು ಎಂದು ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ನಾರಾಯಣಗೌಡ ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ಮಲ್ಲೆಪುರ ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶನಾಲಯ ಹೆಬ್ಬಾಳದ ವತಿಯಿಂದ ಶನಿವಾರ ಆಯೋಜನೆ ಮಾಡಲಾಗಿದ್ದ ಸಮಗ್ರ ಬೇಸಾಯ ಪದ್ಧತಿ ಮೂಲಕ ಪರಿಶಿಷ್ಟ ಜಾತಿ ರೈತರಿಗೆ ಜೀವನೋಪಾಯ ಸುಧಾರಣೆ ಯೋಜನೆಯಡಿ ಕುರಿ ಕೋಳಿ ವಿತರಣೆ ಮಾಡಿ ಅವರು ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮಿನಾರಾಯಣ ಮಾತನಾಡಿ, ಕೃಷಿ ವಿದ್ಯಾನಿಲಯದ ವತಿಯಿಂದ ಪರಿಶಿಷ್ಟಜಾತಿ ರೈತರಿಗೆ ಒಂದು ಕುಟುಂಬಕ್ಕೆ 5 ಕುರಿಗಳನ್ನು ನೀಡುತ್ತಿರುವುದು ಹೆಮ್ಮೆಯ ವಿಷಯ. 5 ಕುರಿಗಳಿಂದ 100 ಕುರಿ ಮಂದೆಯಾಗಿ ಮಾಡಿದರೆ ಜೇಬಿನಲ್ಲಿ ಹಣವಿದ್ದಂತೆ ಯೋಜನೆಯ ಸೌಲಭ್ಯಗಳನ್ನು ಚನ್ನರಾಯಪಟ್ಟಣ ಹೋಬಳಿಯ ವ್ಯಾಪ್ತಿಯ ಗ್ರಾಮಗಳ ರೈತರಿಗೆ ವಿತರಣೆ ಮಾಡುತ್ತಿರುವುದು ಸಂತಸದ ಸಂಗತಿಯೆಂದರು.
ಡಾ.ಜಗದೀಶ್ ಮಾತನಾಡಿ, ಈ ಯೋಜನೆಯು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜಾರಿಯಲ್ಲಿದೆ. ಯೋಜನೆ ಯಿಂದ ಸೌಲಭ್ಯ ಪಡೆದು ಕೊಂಡಿರುವ ರೈತರು ಕುರಿಗಳನ್ನು ಮಾರಾಟ ಮಾಡುವಂತಹ ಯೋಚನೆ ಮಾಡಬಾರದು. ಒಂದು ವೇಳೆ ಯಾರಾದರೂ ಮಾರಾಟ ಮಾಡಿಕೊಂಡರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬಂದು ಪರಿಶೀಲನೆ ಮಾಡಲಾಗುತ್ತದೆ ಎಂದರು. ದೇವನಹಳ್ಳಿ ಎಂ.ಎನ್. ನಾರಾಯಣಸ್ವಾಮಿ ಮುಂತಾದವರು ಹಾಜರಿದ್ದರು.