ರಾಣೆಬೆನ್ನೂರು: ‘ಮಹಾತ್ಮರ ದಿನಾಚರಣೆಗಳು ಯಾವುದೇ ಒಂದು ಸಮಾಜದ ಸ್ವತ್ತಲ್ಲ. ಅವರನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಿ ಹಿಡಿದಿಟ್ಟುಕೊಳ್ಳುವುದೂ ಸಲ್ಲ’ ಎಂದು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅಭಿಪ್ರಾಯಪಟ್ಟರು.
ನಗರದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಭಾನುವಾರ ನಡೆದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸದನವೇ ನಿರ್ಧರಿಸಲಿ: ‘ಜಯಂತಿಗಳಿಗೆ ಸಾರ್ವಜನಿಕ ರಜೆ ಇರಬಾರದು. ಕೇಂದ್ರ ಸರ್ಕಾರ ಗೊತ್ತುಪಡಿಸಿದ ರಜೆಗಳನ್ನು ಹೊರತು ಪಡಿಸಿ, ರಾಜ್ಯ ಸರ್ಕಾರ ಎಲ್ಲ ದಿನಾಚರಣೆಗೆ ರಜೆಯನ್ನು ಘೋಷಣೆ ಮಾಡಬಾರದು. ಆದರೆ, ಹಾಗೆ ಮಾಡದೇ ಸರ್ಕಾರ ನಡೆಸುವುದೇ ಕಷ್ಟವಾಗುತ್ತದೆ.
ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ‘ನನಗೂ ಕೂಡ ಸಾರ್ವಜನಿಕ ರಜೆ ಘೋಷಿಸಲು ಮನಸ್ಸಿಲ್ಲ. ಆದರೆ, ರಜೆ ಬಂದ್ ಮಾಡಿ ದರೆ ಜನರು ನನ್ನನ್ನು ವಿಲನ್ ಥರ ಕಾಣುತ್ತಾರೆ’ ಎನ್ನುತ್ತಾರೆ. ಈ ಬಗ್ಗೆ ಸದನದಲ್ಲಿ ಚರ್ಚಿಸಲು ಅವಕಾಶ ಮಾಡಿಕೊಡಲಾಗುವುದು. ಶಾಸಕರು ಸದನದಲ್ಲಿ ಚರ್ಚೆ ಮಾಡಿ ರಜೆ ನಿಡುವ ಬಗ್ಗೆ ಸದನವೇ ಸೂಕ್ತ ನಿರ್ಣಯ ಕೈಗೊಳ್ಳಲಿ’ ಎಂದರು.
ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಮಾತನಾಡಿದರು. ತಿಳವಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ವೀರಪ್ಪ ಪೂಜಾರ ಉಪನ್ಯಾಸ ನೀಡಿದರು.
ತಹಶೀಲ್ದಾರ್ ರಾಮಮೂರ್ತಿ ಹಾಗೂ ಡಿವೈಎಸ್ಪಿ ಅನಿಲಕುಮಾರ ಭೂಮರಡ್ಡಿ ಅವರು ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ನೊಳಂಬ ವೀರಶೈವ ಸಮಾಜದ ಅಧ್ಯಕ್ಷ ವಿ.ಎನ್.ಶಾಂತನವರ, ಅಖಿಲ ಭಾರತ ಸಿದ್ಧರಾಮೇಶ್ವರ(ಭೋವಿ)ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜಪ್ಪ ತಿಮ್ಮಣ್ಣ ವಡ್ಡರ, ತಾ.ಪಂ. ವ್ಯವಸ್ಥಾಪಕ ಬಸವರಾಜ ಶಿಡೇನೂರು, ಜಗದೀಶ ಕೆರೂಡಿ, ಹನು ಮಂತಪ್ಪ, ಸೀತಾರಾಮರಡ್ಡಿ ಮತ್ತಿತರರಿದ್ದರು.
ಹಲಗೇರಿ, ಅಂಕಸಾಪುರ, ಮಾದಾ ಪುರ, ಹಳೇ ಹೊನ್ನತ್ತಿ ಇದ್ದರು.