ಜಮಖಂಡಿ: ಮಕ್ಕಳಲ್ಲಿ ಹುದುಗಿದ ಸುಪ್ತ ಪ್ರತಿಭೆಯನ್ನು ಗುರುತಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾಂಸ್ಕೃತಿಕ, ಕ್ರೀಡೆ ಹಾಗೂ ಇತರ ಚಟಿವಟಿಕೆಗಳನ್ನು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ ಎಂದು ಎಸಿ ರವೀಂದ್ರ ಕರಲಿಂಗಣ್ಣವರ ಹೇಳಿದರು.
ನಗರದ ಶ್ರೀಗುರುದೇವ ರಾನಡೆ ಮೆಮೊರಿಯಲ್ ಎಜುಕೇಷನ್ ಸೊಸೈಟಿಯ ವಿದ್ಯಾಭವನ ಇಂಟರನ್ಯಾಷನಲ್ ಪಬ್ಲಿಕ್ ಸ್ಕೂಲ ಹಾಗೂ ವಿದ್ಯಾಭ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಗುರುವಾರ ನಡೆದ ವಾರ್ಷಿಕ ಸ್ನೇಹಕೂಟದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬಾಗಲಕೋಟೆಯ ಸಮೃದ್ಧಿ ಗುರುಕುಲ ಶಾಲೆಯ ಪ್ರಾಚಾರ್ಯೆ ಭುವನೇಶ್ವರಿ ಕಲಗುಡಿ ಮಾತನಾಡಿ, ಶೈಕ್ಷಣಿಕ ಪ್ರಗತಿಗಾಗಿ ಮಕ್ಕಳು ನಡೆಸುವ ಪ್ರಯತ್ನಕ್ಕೆ ಶಿಕ್ಷಕರು ಮತ್ತು ಪಾಲಕರು ನೆರವಾಗಬೇಕು ಎಂದರು.
ಮುಧೋಳ ತಾಲ್ಲೂಕಿನ ಶೀರೋಳ ಗ್ರಾಮದ ರಾಮಾರೂಢ ಮಠದ ಶಂಕರಾರೂಢ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು. ವಿಜಯಪುರದ ಬಿ.ಎಂ. ಪಾಟೀಲ ಪಬ್ಲಿಕ್ ಸ್ಕೂಲ್ನ ಪ್ರಾಚಾರ್ಯ ಕೌಶಿಕ್ ಮುಖರ್ಜಿ, ಆರ್ಟಿಇ ನೋಡಲ್ ಅಧಿಕಾರಿ ರವೀಂದ್ರ ಸಂಪಗಾಂವಿ, ನಗರಸಭೆ ಸದಸ್ಯ ಶ್ರೀನಿವಾಸ ಅಪರಂಜಿ ಮಾತನಾಡಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರಸಾದ ಆಪ್ಟೆ ಅಧ್ಯಕ್ಷತೆ ವಹಿಸಿದ್ದರು. ವಿಶೇಷ ಸಾಧನೆಗೈದ ವಿದ್ಯಾರ್ಥಿಗಳಾದ ಶಿವರಾಜ ಜಂಗಮಶೆಟ್ಟಿ, ವಾಣಿಶ್ರೀ ತುಳಸಿಗೇರಿ, ಭಾಗ್ಯಶ್ರೀ ವಾಘ, ಮಾರ್ಗದರ್ಶಕ ಶಿಕ್ಷಕರಾದ ಎಸ್.ಎಸ್. ಕೊಟ್ಟಗಿ, ಶ್ರುತಿ ಬಡಿಗೇರ, ಎಸ್.ಕೆ. ಪರೀಟ, ಬಿ.ಎನ್. ಮರನೂರ ಅವರನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ಲಕ್ಷ್ಮಿದೇವಿ ಅಪರಂಜಿ, ಕುಲದೀಪಿಕಾ ಆಪ್ಟೆ ವೇದಿಕೆಯಲ್ಲಿದ್ದರು. ಸ್ವಪ್ನಾ ಬಡಿಗೇರ ಸ್ವ–ರಚಿತ ಸ್ವಾಗತ ಗೀತೆ ಹಾಡಿದರು. ಪ್ರಾಚಾರ್ಯ ಆರ್.ಎಸ್. ಲಗಳಿ ಸ್ವಾಗತಿಸಿದರು. ಬೃಂಗೇಶ ಹಂಗರಗಿ, ಸವಿತಾ ಹವೇಲಿ, ರಾಜೇಶ್ವರಿ ಮರಡಿ ಅತಿಥಿಗಳನ್ನು ಪರಿಚಯಿಸಿದರು. ಬಿ.ಎಂ. ದೊಡಮನಿ ವರದಿ ವಾಚನ ಮಾಡಿದರು.ಲಕ್ಷ್ಮಿ ಕಡ್ಲಿ ನಿರೂಪಿಸಿದರು. ಸಾವಿತ್ರಿ ಕಕ್ಕೇರಿ ವಂದಿಸಿದರು.