ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಿಳೆಗೆ ಗುರು ಪಟ್ಟ ನೀಡಿದ ಲಿಂಗಾನಂದ ಶ್ರೀ’

Last Updated 16 ಜನವರಿ 2017, 8:30 IST
ಅಕ್ಷರ ಗಾತ್ರ

ಕೂಡಲಸಂಗಮ: ಬಸವಣ್ಣ ನಂತರ ರಾಜ್ಯದ ಯಾವ ಮಠಾಧೀಶರು ಮಹಿಳೆಗೆ ಆಶ್ರಯ ಕೊಟ್ಟು, ಧರ್ಮ ಗುರು ಮಾಡುವ ಕಾರ್ಯ ಮಾಡಲಿಲ್ಲ. ಪ್ರಥಮ ಬಾರಿಗೆ ಮಹಿಳೆಯರಿಗೆ ಆಶ್ರಯ ಕೊಟ್ಟು ಮಹಿಳೆಯರನ್ನು ಧರ್ಮ ಗುರು ಮಾಡಿದವರು ಲಿಂಗೈಕ್ಯ ಲಿಂಗಾನಂದ ಸ್ವಾಮೀಜಿ ಎಂದು ಮಾತೆ ಮಹಾದೇವಿ ಹೇಳಿದರು.

ಕೂಡಲಸಂಗಮದಲ್ಲಿ ನಡೆದ 30ನೇ ಶರಣ ಮೇಳದ ನಾಲ್ಕನೆ ದಿನ ಶನಿವಾರ ರಾತ್ರಿ ನಡೆದ ಸಾಮೂಹಿಕ ಇಷ್ಟಲಿಂಗಾರ್ಚನೆ ಸಮಾರಂಭದಲ್ಲಿ ಮಾತನಾಡಿ ಸಮಾಜದಲ್ಲಿದ್ದ ಸಂಪ್ರದಾಯಗಳನ್ನು ತೊಡೆದು ಹಾಕಿ ಮಹಿಳೆಯರಿಗೆ ಮಠಗಳಲ್ಲಿ ಆಶ್ರಯ ಕೊಟ್ಟು, ಮಠಾಧೀಶರನ್ನಾಗಿ ಮಾಡಿದ ಲಿಂಗಾನಂದ ಸ್ವಾಮೀಜಿ, ಹಲವು ತೊಂದರೆ ಅನುಭವಿಸಿದರು.

ದಾವಣಗೆರೆ ಮಠ ಕಳೆದುಕೊಳ್ಳಬೇಕಾಯಿತು. ಸ್ಥಾವರಕ್ಕೆ ಅಳಿವುಂಟು, ಜಂಗಮಕ್ಕೆ ಅಳಿವಿಲ್ಲ ಎಂದು ನಂಬಿ ಪ್ರವಚನದ ಮೂಲಕ ಬಸವ ಧರ್ಮ ಪೀಠವನ್ನು ಕಟ್ಟಿ ನೂರಾರು ಸಾಧಕಿಯರಿಗೆ ಆಶ್ರಯ ಕೊಟ್ಟರು.

ವಚನ ಸಾಹಿತ್ಯದ ಸಂರಕ್ಷಣೆ ಸ್ಥಳವಾದ ಉಳವಿಯಲ್ಲಿ ಬಸವ ಧರ್ಮ ಪೀಠದ ವತಿಯಿಂದ 3.5 ಎಕರೆ ಭೂಮಿಯನ್ನು ಖರೀದಿಸಿದೆ. ಇಲ್ಲಿ ಯೋಗ ಸಾಧಕರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಬಸವಯೋಗ ಕೇಂದ್ರ ಸ್ಥಾಪಿಸಲಾಗುವುದು.  ಫೆ.24ರಂದು ಗಣಮೇಳ ಹಾಗೂ ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಸಮಾರಂಭದಲ್ಲಿ ಮಾತೆ ಗಂಗಾದೇವಿ, ಬಸವಕುಮಾರ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ,ಚನ್ನಬಸವರಾಜ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ,ಮಾತೆ ದಾನೇಶ್ವರಿ, ಮಾತೆ ಸತ್ಯಾದೇವಿ ಮುಂತಾದವರು ಇದ್ದರು. 
ಕೂಡಲಸಂಗಮದ ಬಸವೇಶ್ವರ ಐಕ್ಯ ಮಂಟಪದಿಂದ ಬಸವ ಧರ್ಮ ಪೀಠದ ಮಹಾಮನೆಯವರೆಗೆ ಪಥ ಸಂಚಲನ ಸಮಾರಂಭ ನಡೆಯಿತು. ಬಸವ ಧರ್ಮ ಪೀಠದ ಉತ್ತರಾಧಿಕಾರಿ ಮಾತೆ ಗಂಗಾದೇವಿ ಬಸವಣ್ಣನ ಐಕ್ಯ ಸ್ಥಳಕ್ಕೆ ಪೂಜೆ ಸಲ್ಲಿಸಿದರು.

6 ರಾಜ್ಯದ ಅಪಾರ ಶರಣ, ಶರಣೆಯರು ವಚನಗಳಿಗೆ ಜಯಕಾರ, ವಚನ ಹಾಡಿ ನಲಿದರು, 7 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಪ್ರಾರ್ಥನೆ ಮಾಡಿದರು.
ಭಕ್ತರ ಆಕ್ರೋಶ: ಫಥ ಸಂಚಲನದ ರಸ್ತೆಯಲ್ಲಿ ಸಮರ್ಪಕ ವಿದ್ಯುತ್ ಸೌಲಭ್ಯ ಇರದ ಪರಿಣಾಮ ಭಕ್ತರು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಅಧಿಕಾರಿಗಳ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಕುಂಬಳಗೊಂಡ ಬಸವ ಗಂಗೋತ್ರಿ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಪ್ರಾಧಿಕಾರ ತನ್ನ ವ್ಯಾಪ್ತಿಯಲ್ಲಿ ಸುಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಮರ್ಪಕ ಮೂಲಸೌಲಭ್ಯ ಕಲ್ಪಿಸಬೇಕು. ದೇಗುಲಕ್ಕೆ ಬರುವ ಭಕ್ತರಿಗೆ ಶೌಚಾಲಯ ಕೊರತೆಯಿದೆ. ರಸ್ತೆಯಲ್ಲಿ ಸಮರ್ಪಕ ಬೀದಿ ದೀಪಗಳು ಇಲ್ಲ. ಪ್ರತಿ ವರ್ಷವೂ 14ರಂದು ಪಥ ಸಂಚಲನ ಮಾಡುತ್ತೇವೆ. ಇದರಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುವರು ಎಂದು ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ  ಬಸವೇಶ್ವರ ಹೆಸರು ಇಡಲು ಆಗ್ರಹ
ಶರಣಮೇಳದ ವಿವಿಧ ನಿರ್ಣಯಗಳು
ಕೂಡಲಸಂಗಮ: 
ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ‘ಬಸವೇಶ್ವರ ವಿಶ್ವವಿದ್ಯಾಲಯ’ ಎಂದು ಹೆಸರು ಇಡಬೇಕು’ ಎಂದು ಇಲ್ಲಿ ನಡೆದ 30ನೇ ಶರಣ ಮೇಳದಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಶರಣ ಮೇಳದಲ್ಲಿ ಕೈಗೊಂಡ ನಿರ್ಣಯಗಳ ಕುರಿತು ಕೂಡಲಸಂಗಮ ಬಸವಧರ್ಮ ಪೀಠದ ಅಧಕ್ಷೆ ಮಾತೆ ಮಹಾದೇವಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

‘ವಿಧಾನಸಭಾ ಮತಕ್ಷೇತ್ರಗಳಾದ ಹುನಗುಂದಕ್ಕ ಕೂಡಲಸಂಗಮ ಮತಕ್ಷೇತ್ರ ಎಂದು, ಜೊಯಿಡಾಕ್ಕೆ ಚನ್ನಬಸವೇಶ್ವರ, ಕೊಳ್ಳೇಗಾಲಕ್ಕೆ ಮಾದೇಶ್ವರ ವಿಧಾನಸಭಾ ಮತಕ್ಷೇತ್ರ ಎಂದು ನಾಮಕರಣ ಮಾಡಬೇಕು.  ಕೂಡಲಸಂಗಮ ಅಭಿವೃದ್ದಿ ಮಂಡಳಿಯ ವ್ಯಾಪ್ತಿಯಲ್ಲಿ ಭಕ್ತರಿಗೆ ಸಮಪರ್ಕ ಮೂಲಸೌಲಭ್ಯಗಳ ಕೊರತೆಯಿದ್ದು, ಕೂಡಲೇ ಸರಿಪಡಿಸಬೇಕು ಎಂದು ನಿರ್ಣಯ ಅಂಗೀಕರಿಸಲಾಯಿತು’ ಎಂದು ಅವರು ವಿವರಿಸಿದರು.

‘ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನಿಡಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಆರು ರಾಜ್ಯಗಳ ರಾಷ್ಟ್ರೀಯ ಬಸವ ದಳದ ಎಲ್ಲ ಸಂಘಟನೆಗಳು ಸ್ವತಂತ್ರ ಧರ್ಮದ ಮಾನ್ಯತೆಯ ಹೋರಾಟಕ್ಕೆ ಎಲ್ಲ ತಯಾರಿ ಮಾಡಿಕೊಳ್ಳಬೇಕು.

ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವಂತೆ ಶಿಫಾರಸ್ಸು ಪತ್ರ ಕೊಡುವವರೆಗೆ ರಾಜ್ಯದ ಎಲ್ಲ ವಿಧಾನಸಭಾ, ಲೋಕಸಭಾ ಮತಕ್ಷೇತ್ರದ ಚುನಾಯಿತ ಪ್ರತಿನಿಧಿಗಳ ಮನೆಯ ಮುಂದೆ ಸಾಂಕೇತಿಕ ಧರಣಿ ಕೈಗೊಳ್ಳಲು ನಿರ್ಧರಿಸಲಾಗಿದೆ’ ಎಂದು ಮಾತೆಮಹಾದೇವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT