ಕನಕಪುರ: ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅವರು ಚೆನ್ನಾಗಿರುವ ಕಟ್ಟಡ ಒಡೆದು ಹೊಸದಾಗಿ ನಿರ್ಮಾಣ ಮಾಡುವುದೇ ಅಭಿವೃದ್ಧಿ ಎಂದು ಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮರಿಲಿಂಗೇಗೌಡ ಆರೋಪಿಸಿದರು.
ತಾಲ್ಲೂಕಿನ ಹರಟಬಲೆ ಗ್ರಾಮದಲ್ಲಿ ಎ.ಪಿ.ಎಂ.ಸಿ. ಚುನಾವಣೆಯ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಶಿವಕುಮಾರ್ ಅವರೇ ಸಾವಿರಾರು ಕೋಟಿ ಅನುದಾನದಲ್ಲಿ ತಾಲ್ಲೂಕನ್ನು ಅಭಿವೃದ್ದಿಗೊಳಿಸುತ್ತಿರುವುದಾಗಿ ಹೇಳುತ್ತಾರೆ. ಆ ಹಣ ಯಾರದ್ದು, ಸಾರ್ವಜನಿಕರ ತೆರಿಗೆ ಹಣ, ಅಂತಹ ಹಣವನ್ನು ತಮಗೆ ಇಷ್ಟ ಬಂದ ರೀತಿಯಲ್ಲಿ ಖರ್ಚು ಮಾಡುತ್ತಿದ್ದಾರೆ. ಹಿಂದಿನ ಅವಧಿಗಳಲ್ಲಿ ತಾಲ್ಲೂಕಿನಲ್ಲಿ ಆಗಿರುವ ಚೆನ್ನಾಗಿರುವ ಕಟ್ಟಡಗಳನ್ನು ಕೆಡವಿ ತಮ್ಮ ಹೆಸರು ಹಾಕಿಸಲಿಕ್ಕೆ ಹೊಸ ಕಟ್ಟಡ ಕಟ್ಟುತ್ತಿದ್ದಾರೆಂದು ದೂರಿದರು.
ದೊಡ್ಡಮುದುವಾಡಿ ಕ್ಷೇತ್ರದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ದೇವುರಾವ್ ಜಾದವ್ ಮಾತನಾಡಿ, ‘ವೃತ್ತಿಯಲ್ಲಿ ವಕೀಲನಾಗಿರುವ ನಾನು ರೈತಪರ ಕಾಳಜಿಯಿಂದ, ರೈತರ ಅಭಿವೃದ್ದಿಗಾಗಿ ದುಡಿಯುವ ಮನಸ್ಸಿನಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ’ ಎಂದರು.
ಕೊಟ್ಟಗಾಳು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಮುದುವಾಡಿ ನಾಗರಾಜು, ಚಿಕ್ಕಮುದುವಾಡಿ ಪ್ರಕಾಶ್, ಬಂಡಿಗನಹಳ್ಳಿ ನಾಗೇಶ್, ಆರತಿಪಾಳ್ಯ ಮಾದೇಶ್, ಹನುಮಂತನಗರ ಲಕ್ಷ್ಮಣ್, ಹರಟಬಲೆ ಅತಾವುಲ್ಲಾ, ಪಾರೂಕ್ ಮತ್ತಿತರರು ಉಪಸ್ಥಿತರಿದ್ದರು