ಹೂವಿನಹಡಗಲಿ: ‘ವಚನಕಾರ ಶಿವಯೋಗಿ ಸಿದ್ಧರಾಮೇಶ್ವರರು ಜಾತಿ, ವರ್ಗ ರಹಿತ ಸಮ ಸಮಾಜ ನಿರ್ಮಿಸುವುದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು’ ಎಂದು ತಹಶೀಲ್ದಾರ್ ಕೆ.ರಾಘವೇಂದ್ರರಾವ್ ಹೇಳಿದರು.
ತಾಲ್ಲೂಕು ಪಂಚಾಯ್ತಿ ಮಲ್ಲಿಗೆ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯಲ್ಲಿ ಅವರು ಮಾತನಾಡಿದರು.
‘ಸಾಮಾನ್ಯ ಕುಟುಂಬದಲ್ಲಿ ಜನಿಸಿದ್ದ ಸಿದ್ಧರಾಮೇಶ್ವರರು ಸಮಾಜ ತಿದ್ದುವ ವಚನ ರಚಿಸುವ ಮೂಲಕ ಅಸಾಮಾನ್ಯ ವಚನಕಾರರಾಗಿ ರೂಪುಗೊಂಡಿದ್ದರು. ಉತ್ತಮ ಸಮಾಜಕ್ಕಾಗಿ ದಾರ್ಶನಿಕರು, ದಾಸರು, ಸಂತರು, ಶಿವಯೋಗಿಗಳು ಮಹತ್ತರ ಕೊಡುಗೆ ನೀಡಿರುವ ಫಲವಾಗಿ ಇಂದು ನಾವೆಲ್ಲಾ ಉತ್ತಮ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ’ ಎಂದರು.
‘ವೈಜ್ಞಾನಿಕವಾಗಿ ದೇಶ ಮುಂದುವರಿದಿದ್ದರೂ ಜಾತಿ, ಮತ ಭೇದಗಳು ಹೆಚ್ಚಾಗುತ್ತಲೇ ಇವೆ. ಎಲ್ಲ ಸಮಾಜಗಳು ಒಟ್ಟಾಗಿ ತಾರತಮ್ಯ ರಹಿತ ಜೀವನ ನಡೆಸಲಿ ಎಂಬ ಸದಾಶಯದಿಂದ ಮಹಾತ್ಮರ ಜಯಂತಿಗಳನ್ನು ಸರ್ಕಾರವೇ ಆಚರಿಸುತ್ತಿದೆ. ದಾರ್ಶನಿಕರ ತತ್ವಾದರ್ಶ, ಚಿಂತನೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಹೊನ್ನಪ್ಪ ಕಣವಿ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಭೋವಿ ಸಮಾಜದ ಅಧ್ಯಕ್ಷ ವಿ.ದುರುಗಪ್ಪ, ಸಾಹಿತಿ ಡಾ. ಅಂಜನಾ ಕೃಷ್ಣಪ್ಪ ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಕೃಷ್ಣಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ.ಪಿ.ಎಂ. ಮಂಜುನಾಥ, ಬಸವ ಕೇಂದ್ರದ ಅಧ್ಯಕ್ಷ ಪರಶೆಟ್ಟಿ ಮಲ್ಲಣ್ಣ, ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಹೊಸಕೇರಿ ಬೀರಪ್ಪ, ಆರ್ಯ ಈಡಿಗರ ಸಮಾಜದ ಅಧ್ಯಕ್ಷ ಈಡಿಗರ ಕೃಷ್ಣಪ್ಪ, ಶ್ರೀನಿವಾಸ ಭೋವಿ, ಬಿ.ಕರಿಯಪ್ಪ, ಅಂಜಿನಪ್ಪ, ವಿ.ತಿಪ್ಪೇಶ, ಭೋವಿ ಯಲ್ಲಪ್ಪ, ತಳಕಲ್ಲು ವೆಂಕಟೇಶ ಇತರರು ಇದ್ದರು.
ಅಚ್ಯುತಾನಂದ ಪ್ರಾರ್ಥಿಸಿದರು. ಪ್ರಕಾಶ ಜೈನ್ ಸಂಗಡಿಗರು ಸಿದ್ಧರಾಮೇಶ್ವರರ ವಚನ ಹಾಡಿದರು. ಸಮಾಜ ಕಲ್ಯಾಣಾಧಿಕಾರಿ ಕೆ.ಎಂ.ಜಯದೇವಯ್ಯ ಸ್ವಾಗತಿಸಿದರು. ಎಂ. ಚಿದಾನಂದ ನಿರೂಪಿಸಿದರು. ಬೋವಿ ತಿಪ್ಪೇಶ ವಂದಿಸಿದರು. ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಿದ್ಧರಾಮೇಶ್ವರರ ಭಾವಚಿತ್ರ ಮೆರವಣಿಗೆ ಜರುಗಿತು.