ಬಳ್ಳಾರಿ: ಇವರು ಬಿಸಿಲು ಲೆಕ್ಕಿಸದೆ ಹೂ ಮಾರುವ ಮಹಿಳೆಯರು. ಇವರ ಕೈಯಲ್ಲಿರುವ ಹೂವಿನ ಹಾರಗಳು ತುಸು ಬಾಡಿದರೂ, ಇವರು ಮಾತ್ರ ಎಂದಿಗೂ ಬಾಡುವುದಿಲ್ಲ. ಧೂಳು, ಹಸಿವು, ನೀರಡಿಕೆ, ಬೆವರಿಳಿಸುವ ಬಿಸಿಲ ನಡುವೆ ಇವರ ಮೊಗದಲ್ಲಿ ಹೂ ಮಾರುವ ಕಾತರ ಮತ್ತು ಸ್ವಾವಲಂಬನೆಯ ಸರಳ ಸೂತ್ರ ಮಾತ್ರ ಪರಿಮಳದಂತೆ ಹಬ್ಬಿರುತ್ತದೆ.
ಇವರಲ್ಲಿ ಹೆಚ್ಚಿನವರು ರಾಣಿತೋಟ ಹಾಗೂ ಮಿಲ್ಲರ್ಪೇಟೆ ಪ್ರದೇಶದವರು. ಒಂದೇ ವಯಸ್ಸಿನವರಂತೂ ಅಲ್ಲ. 50 ವರ್ಷದಿಂದ ಹೂ ಮಾರುತ್ತಿರುವ 80ರ ವೃದ್ಧೆ ನಾಗಮ್ಮ ಎಲ್ಲರಿಗಿಂತ ಹಿರಿಯರೆನ್ನಬಹುದು. ಉಳಿದಂತೆ ಕಳೆದ ವರ್ಷ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿರುವ ಗೌಸಿಯಾ, ಆಕೆಗಿಂತ ಒಂದೆರಡು ಹೆಚ್ಚು ವರ್ಷ ಹಿರಿಯರಾದ ಮಾಧವಿ, ಮಕ್ಕಳೊಂದಿಗರಾದ ಲಕ್ಷ್ಮಿ ಅವರ ಹಾಗೇ ಗೃಹಿಣಿಯರಾದ ಹಲವರು.
ಬಡತನ ಇವರ ಮನೆತನ. ಅದರ ರೂಪ ಹಲವು. ಹೂವು ಮಾರುವುದು ಅವರ ಹಸಿವು ಇಂಗಿಸುವ ಹಾಗೂ ಕುಟುಂಬವನ್ನು ಪೊರೆಯುವ ಏಕೈಕ ದಾರಿ. ಧೂಳುಮಯವಾದ ನಗರದ ಕಣೇಕಲ್ ಬಸ್ ನಿಲ್ದಾಣಕ್ಕೆ ಬರುವ ನಗರ ಸಾರಿಗೆ ಬಸ್ಗಳು, ಆಟೊರಿಕ್ಷಾಗಳಲ್ಲಿ ಬಂದಿಳಿಯುವ ಪ್ರಯಾಣಿಕರನ್ನು ಅದರಲ್ಲೂ ಮಹಿಳೆಯರತ್ತ ಧಾವಿಸುವ ಈ ಮಂದಿ ಹೂವಿನ ಹಾರವನ್ನು ಮುಂದೊಡ್ಡುತ್ತಾರೆ. ಬೆಲೆ ಹೇಳಿ ಅವರೇ ಚೌಕಾಸಿಯನ್ನೂ ಮಾಡುತ್ತಾರೆ. ಒಂದೆರಡು ಮೊಳ ಹೆಚ್ಚು ಮಾರಾಟವಾದರೆ ಅವರ ಮೊಗದಲ್ಲಿ ಸಂತಸ ಮಿನುಗುತ್ತದೆ.
ಆಂಧ್ರ ಕಡೆಗೆ ತೆರಳುವ ಬಸ್ಗಳು ಬಂದರೆ ಇವರು ಅಲ್ಲಿಗೇ ಧಾವಿಸುತ್ತಾರೆ. ಕಿಟಿಕಿಯ ಬಳಿ ಕುಳಿತ ಮಹಿಳೆಯರ ಹತ್ತಿರಕ್ಕೆ ಹಾರವನ್ನು ಒಯ್ಯುತ್ತಾರೆ. ‘ಒಂದೆರಡು ಮೊಳ ತಗೊಳ್ಳಿ ಅಕ್ಕಾ’ ಎಂದು ದುಂಬಾಲು ಬೀಳುತ್ತಾರೆ. ಅವರ ಅಂಥ ಪ್ರಯತ್ನದ ಪರಿಣಾಮವಾಗಿಯೇ ಬಳ್ಳಾರಿಯ ಹೂ ಮಾಲೆಗಳು ಆಂಧ್ರದ ಬೊಮ್ಮನಹಾಳು, ಕಣೇಕಲ್ಲು, ಕಣೇಕಲ್ಲು ಕ್ರಾಸ್, ರಾಯದುರ್ಗ, ಹಿಂದೂಪುರ, ಉರವಕೊಂಡದಿಂದ ಅನಂತಪುರದವರೆಗೂ ಪಯಣಿಸುತ್ತವೆ!
ನಗರದ ಬೇರೆ ಯಾವುದೇ ಬಸ್ ನಿಲ್ದಾಣ, ಮಾರುಕಟ್ಟೆ ಪ್ರದೇಶಕ್ಕೆ ಹೋದರೆ, ಅಲ್ಲಿ ಹೂ ಮಾರುವವರು ಇದ್ದಲ್ಲೇ ಕುಳಿತಿರುತ್ತಾರೆ.
ಹೂ ಬೇಕಾದವರು ಅವರಲ್ಲಿಗೇ ಹೋಗಿ ಖರೀದಿಸುವುದು ಸಾಮಾನ್ಯ ದೃಶ್ಯ. ಆದರೆ ಕಣೇಕಲ್ ನಿಲ್ದಾಣದಲ್ಲಿ ಇದಕ್ಕೆ ತದ್ವಿರುದ್ಧ ದೃಶ್ಯಗಳು ಕಂಡುಬರುತ್ತವೆ.
ಬೆಳಿಗ್ಗೆಯೇ ಬೆಂಗಳೂರು ರಸ್ತೆಯ ಹೂವಿನ ಮಾರುಕಟ್ಟೆಗೆ ಹೋಗಿ ಬಿಡಿ ಹೂವನ್ನು ತರುವ ಈ ಮಹಿಳೆಯರು ಹೂಮಾಲೆಗಳನ್ನು ಸಿದ್ಧಪಡಿಸಿ ಬೆಳಗಿನ ತಿಂಡಿ ತಿಂದು ನಿಲ್ದಾಣಕ್ಕೆ ಬಂದರೆ ಮತ್ತೆ ಮನೆಗೆ ತೆರಳುವುದು ಮಧ್ಯಾಹ್ನದ ಬಳಿಕವೇ, ನಂತರ ಸಂಜೆ 4ರ ವೇಳೆಗೆ ಬಂದರೆ ಆರೇಳು ಗಂಟೆವರೆಗೂ ಹೂ ಮಾರುವ ಕಾಯಕ ನಡೆಯುತ್ತದೆ. ಇವರು ನಿಂತಲ್ಲಿ ನಿಲ್ಲುವುದಿಲ್ಲ ಎಂಬುದೇ ವಿಶೇಷ.
ಪ್ರತಿಯೊಬ್ಬರು ದಿನಕ್ಕೆ ಏನಿಲ್ಲವೆಂದರೂ 150ರಿಂದ 250 ರೂಪಾಯಿವರೆಗೂ ಸಂಪಾದಿಸುತ್ತಾರೆ. ಮನೆ, ಗಂಡ, ಮಕ್ಕಳಿರುವ ಮನೆಯಲ್ಲಿ ಇವರ ಸಂಪಾದನೆ ಇಲ್ಲದಿದ್ದರೆ ಕಷ್ಟ ಎಂಬ ಪರಿಸ್ಥಿತಿ. ಆದರೆ ಹೂವು ಮಾರುವುದು ಇವರಿಗೆ ಎಂದಿಗೂ ಕಷ್ಟ ಎನ್ನಿಸಿಲ್ಲ. ‘ಗಂಡ,ಮಕ್ಕಳು ಚೆನ್ನಾಗಿದ್ದರೆ ನಾವೂ ಚೆನ್ನಾಗಿರ್ತೇವೆ’ ಎಂಬುದು ಗೃಹಿಣಿ ಲಕ್ಷ್ಮಿ ಅವರ ಮಾತು.
ಋಣದಾಗ ಇರಬಾರ್ದು
ಗಟ್ಟಿಮೈಯಿನ, ಉತ್ಸಾಹಿ ಗೃಹಿಣಿಯರ ನಡುವೆ, 80ರ ವೃದ್ಧೆ ನಾಗಮ್ಮ ಕೂಡ ಹೂವು ಮಾರುವ ಉತ್ಸಾಹವನ್ನು ಉಳಿಸಿಕೊಂಡಿರುವುದು ಗಮನ ಸೆಳೆಯುತ್ತದೆ. ಈ ವಯಸ್ಸಿನಲ್ಲೂ ಹೂ ಮಾರಬೇಕೆ ಎಂದು ಕೇಳಿದರೆ ಅವರು, ‘ಮೊಮ್ಮಗ ಇದ್ದಾನೆ. ಹೂ ಮಾರೋದು ಬೇಡ ಅಂತಾನೆ.
ಆದರೆ ಒಬ್ಬರ ಋಣದಲ್ಲಿ ಇರಬಾರದು ಎಂದೇ ಕೈಲಾದಷ್ಟು ಹೂ ಮಾರುತ್ತೇನೆ. ಬೇಕೆನಿಸಿದಾಗ ಸಾಯಿಬಾಬ ಗುಡಿಗೆ, ಎರ್ರಿತಾತನ ಮಠಕ್ಕೆ ಹೋಗಿಬರುತ್ತೇನೆ. ನನ್ನ ಅನ್ನವನ್ನು ನಾನು ಸಂಪಾದಿಸಿಕೊಳ್ಳುತ್ತೇನೆ. ಅಷ್ಟು ಸಾಕು’ ಎನ್ನುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.