ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ‘ರಾಷ್ಟ್ರೀಯ ಬಸವ ಕೃಷಿ’ ಪ್ರಶಸ್ತಿ ಸ್ವೀಕರಿಸಲು ಕೂಡಲಸಂಗಮಕ್ಕೆ ಗುವಾಹಟಿಯಿಂದ ರೈಲಿನಲ್ಲಿ ಬಂದದ್ದು ನಿಜಕ್ಕೂ ಆಶ್ಚರ್ಯಕರ. ನೂರು ಕಿ.ಮೀ. ದೂರದ ಸ್ಥಳಕ್ಕೆ ಹೋಗಬೇಕಾದರೂ ವಿಶೇಷ ವಿಮಾನದ ಸೇವೆ ಬಯಸುವ ರಾಜಕಾರಣಿಗಳು ಇರುವ ದೇಶದಲ್ಲಿ, ಗಂಟೆಗಟ್ಟಲೆ ರೈಲಿನಲ್ಲಿ ಪ್ರಯಾಣಿಸಿ ಬಂದ ಮಾಣಿಕ್ ಅವರ ಸರಳತನ ಸ್ತುತ್ಯರ್ಹ.
ಶಿಷ್ಟಾಚಾರದ ಪ್ರಕಾರ ಅವರು ವಿಶೇಷ ವಿಮಾನದ ಸೇವೆ ಪಡೆಯಬಹುದಿತ್ತು. ಅದರೂ ಜನಸಾಮಾನ್ಯರಂತೆ ರೈಲಿನಲ್ಲಿ ಪ್ರಯಾಣಿಸಿದ್ದು, ನಮ್ಮ ರಾಜಕಾರಣಿಗಳ ಕಣ್ಣು ತೆರೆಸಬೇಕು. ಬಹುಶಃ ಸರಳತನ ಮತ್ತು ಸಜ್ಜನಿಕೆಯೇ ಮಾಣಿಕ್ ಅವರನ್ನು ಬಹುಕಾಲ ತ್ರಿಪುರಾದ ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿರಬೇಕು.
ಜಗತ್ತಿನಾದ್ಯಂತ ಕಮ್ಯುನಿಸಂ ನಶಿಸುತ್ತಿದ್ದರೂ ತ್ರಿಪುರಾದಲ್ಲಿ ಅದು ಇನ್ನೂ ಬದುಕಿದ್ದರೆ ಅದಕ್ಕೆ ಕಾರಣ ಜನರು ಮಾಣಿಕ್ ಸರ್ಕಾರದ ಆಡಳಿತದ ಬಗ್ಗೆ ಇರಿಸಿರುವ ನಂಬಿಕೆ ಮತ್ತು ವಿಶ್ವಾಸ. ಜನ ಮಾಣಿಕ್ ಅವರಿಗೆ ಮತ ಹಾಕಿದ್ದಕ್ಕೆ ಕಮ್ಯುನಿಸ್ಟರು ಗದ್ದುಗೆ ಹಿಡಿದರು ಎನ್ನುವ ಟೀಕೆಯಲ್ಲಿ ಅರ್ಥವಿಲ್ಲದಿಲ್ಲ.
-ರಮಾನಂದ ಶರ್ಮಾ, ಬೆಂಗಳೂರು