ಢಾಕಾ: 2014ರಲ್ಲಿ ನಡೆದ ನಾರಾಯಣ್ಗಂಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 26 ಜನರಿಗೆ ಗಲ್ಲುಶಿಕ್ಷೆ ಹಾಗೂ ಇತರ 9 ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. 2014ರಲ್ಲಿ ನಡೆದಿದ್ದ ಪ್ರಕರಣದಲ್ಲಿ ನಾರಾಯಣಗಂಜ್ನಲ್ಲಿ 7 ಜನರ ಬರ್ಬರ ಹತ್ಯೆ ನಡೆಸಲಾಗಿತ್ತು.
ನಾರಾಯಣ್ಗಂಜ್ ನಗರಸಭೆಯ ಮಾಜಿ ಸದಸ್ಯ ನೂರ್ ಹುಸೇನ್ ಹಾಗೂ ಬಾಂಗ್ಲಾ ಸೇನೆಯ ಮಾಜಿ ಲೆಫ್ಟಿನೆಂಟ್ ಕರ್ನಲ್ ತಾರೀಕ್ ಸಯೀದ್ ಅವರಿಗೂ ಮರಣದಂಡನೆ ವಿಧಿಸಲಾಗಿದೆ.
ಹತ್ಯಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಹುಸೇನ್ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಭಾರತಕ್ಕೆ ಪರಾರಿಯಾಗಿದ್ದ. ಆತನನ್ನು ಬಂಧಿಸಿದ್ದ ಪಶ್ಚಿಮ ಬಂಗಾಳ ಪೊಲೀಸರು 2015ರಲ್ಲಿ ಬಾಂಗ್ಲಾಕ್ಕೆ ಗಡೀಪಾರು ಮಾಡಿದ್ದರು. 2014ರ ಏಪ್ರಿಲ್ 27ರಂದು ನಾರಾಯಣ್ಗಂಜ್ ನಗರ ಪಾಲಿಕೆ ಮೇಯರ್ ನಜ್ರಲ್ ಇಸ್ಲಾಂ ಹಾಗೂ ಹಿರಿಯ ವಕೀಲ ಚಂದನ್ ಸರ್ಕಾರ್ ಸಹಿತ 7 ಮಂದಿಯನ್ನು ಅಪಹರಿಸಿ ಹತ್ಯೆ ಮಾಡಲಾಗಿತ್ತು. ಅಪಹರಣವಾಗಿ ಕೆಲವು ದಿನಗಳ ನಂತರ ಇವರ ಶವಗಳು ಶಿತಾಲಖ್ಯ ನದಿಯಲ್ಲಿ ತೇಲಿ ಬಂದಿದ್ದವು.