ಕಲಬುರ್ಗಿ: ಏಕಾಗ್ರತೆಗೆ ಹೆಚ್ಚಿನ ಒತ್ತು ನೀಡಿದ್ದ ಸ್ವಾಮಿ ವಿವೇಕಾನಂದರು ತಮ್ಮ ಇತಿ ಮಿತಿಗಳು ಮತ್ತೊಂದು ಕಡೆ ಹರಿಯಗೂಡದಂತೆ ಎಚ್ಚರ ವಹಿಸುತ್ತಿದ್ದರು ಎಂದು ಮಹೇಶ್ವರಾನಂದ ಸ್ವಾಮೀಜಿ ಹೇಳಿದರು.
ನಗರದ ದೊಡ್ಡಪ್ಪ ಅಪ್ಪ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಈಚೆಗೆ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಕಾರ್ಯಗಾರದಲ್ಲಿ ಮಾತನಾಡಿದರು.
ಮನುಷ್ಯನಿಗೆ ಹಿಮಾಲಯದಷ್ಟು ಎತ್ತರವಾದ ಗುರಿ ಇರಬೇಕು. ಅದನ್ನು ಸಾಧಿಸುವ ಛಲ ಇರಬೇಕು. ತಮ್ಮ ಕಾರ್ಯಪ್ರವೃತ್ತಿಯಲ್ಲಿ ಗುರಿ ಸಾಧಿಸಲು ವಿವೇಕಾನಂದರು ಹಲವು ಪುಸ್ತಕಗಳನ್ನು ಬರೆದಿದ್ದು, ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಅವರ ಜೀವನಾಧಾರಿತ ಕೃತಿಗಳು ಓದಬೇಕು. ಅವುಗಳ ಓದಿನಿಂದ ಬುದ್ಧಿಯ ವಿಕಸನ, ಸಾಧಿಸುವ ಛಲ ತಾನಾಗಿಯೇ ಮೂಡುತ್ತದೆ. ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.