ಚಿಕ್ಕಮಗಳೂರು: ನ್ಯಾಯಬೆಲೆ ಅಂಗಡಿ ಯಲ್ಲಿ ವಿತರಿಸುವ ಪಡಿತರ ಗುಣಮಟ್ಟ ಇಲ್ಲದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಎಚ್ಚರಿಕೆ ನೀಡಿದರು.
ಶೃಂಗೇರಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಸಾರ್ವಜನಿಕರಿಗೆ ಗುಣಮಟ್ಟದ ಹಾಗೂ ನಿಗದಿತ ಪ್ರಮಾಣದ ಪಡಿತರ ವಿತರಿಸುವುದು ಸರ್ಕಾರದ ಧ್ಯೇಯ. ಅಧಿಕಾರಿಗಳು ಸರ್ಕಾರದ ಉದ್ದೇಶವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸ ಬೇಕು. ತಪ್ಪಿದಲ್ಲಿ ಆಹಾರ ನಿರೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನ್ಯಾಯಬೆಲೆ ಅಂಗಡಿಯವರು ಗೋದಾಮಿನಿಂದ ಆಹಾರ ಪದಾರ್ಥ ಪಡೆಯುವಾಗ ಅವುಗಳಲ್ಲಿ ಗುಣ ಮಟ್ಟದಲ್ಲಿ ಇಲ್ಲದಿದ್ದರೆ ಅದನ್ನು ಅಲ್ಲಿಯೇ ತಿರಸ್ಕರಿಸಬೇಕು. ಈ ಬಗ್ಗೆ ದೂರುಗಳನ್ನು ತಮ್ಮ ಗಮನಕ್ಕೆ ತಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳ ಲಾಗುವುದು. ಜನ ಸಾಮಾನ್ಯರು ಕೂಡಾ ಶುದ್ಧ ಆಹಾರ ಪದಾರ್ಥಗಳು ಆಗಿಲ್ಲ ದಿದ್ದಲ್ಲಿ ಅವುಗಳನ್ನು ತಿರಸ್ಕರಿಸಬೇಕು ಎಂದರು.
ಸರ್ಕಾರದಿಂದ ಆಹಾರ ಪದಾರ್ಥ ಬಿಡುಗಡೆ ಆಗುವ ಸಂದರ್ಭವನ್ನು ಸಾರ್ವಜನಿಕರಿಗೆ ಪತ್ರಿಕೆಗಳ ಮೂಲಕ ಮಾಹಿತಿ ನೀಡಬೇಕು. ಇದರಿಂದ ಅವರಲ್ಲಾಗುವ ಗೊಂದಲ ತಪ್ಪಿಸಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ 8 ಲಕ್ಷಕ್ಕೂ ಹೆಚ್ಚು ನಕಲಿ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಅವುಗಳಿಗೆ ಕಡಿವಾಣ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಆಧಾರ್ ಸಂಖ್ಯೆ ಜೋಡಿ ಸಲು ಸಾರ್ವಜನಿಕರಿಗೆ ತಿಳಿಸಲಾಗಿದೆ. ಸಾರ್ವಜನಿಕರು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಹೊಸ ಬಿಪಿಎಲ್ ಕಾರ್ಡುಗಳನ್ನು ನೀಡುವ ನೀತಿ ಸರಳಗೊಳಿಸಲಾಗಿದೆ. ಈ ವರ್ಗೀಕರಣ ಸರಳವಾಗಿದೆ. ಇದರಿಂದ ವರ್ಗೀಕರಣ ಮಾಡಲು ಈ ಮೊದಲು ಇದ್ದ ಗೊಂದಲ ದೂರವಾಗಿದೆ ಎಂದರು.
ಸರ್ಕಾರ ಮುಂದಿನ ದಿನಗಳಲ್ಲಿ ಪ್ರೋಟಿನ್ ಯುಕ್ತ ಆಹಾರ ಪದಾರ್ಥ ನೀಡಲು ಮುಂದಾಗಿದೆ. ಪ್ರತಿ ಪಡಿತರ ಕಾರ್ಡಿಗೆ 1 ಕೆ.ಜಿ ಯಾವುದೇ ಬೇಳೆ ಕಾಳು ನೀಡಲಾಗುವುದು. ಸರ್ಕಾರದ ವತಿಯಿಂದ ನೀಡಲಾಗುತ್ತಿರುವ ಅಯೋಡಿನ್ ಹಾಗೂ ಕಬ್ಬಿಣಯುಕ್ತ ಉಪ್ಪು ಉತ್ತಮ ಗುಣಮಟ್ಟದ್ದಾಗಿದೆ. ಅದು ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ, ಕೇವಲ ಬಣ್ಣ ಬದಲಾವಣೆ ಆಗುವುದು ಎಂದು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದರು.
ಕೇಂದ್ರ ಸರ್ಕಾರ ಈಗಾಗಲೆ ಸೀಮೆಎಣ್ಣೆ ಬಿಡುಗಡೆ ಮಾಡುವುದನ್ನು ಹಂತಹಂತವಾಗಿ ಕಡಿತಗೊಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೀಮೆ ಎಣ್ಣೆ ನೀಡುವು ದನ್ನು ಕಡಿಮೆ ಮಾಡಿದೆ. ವಿಶ್ವಮಟ್ಟದಲ್ಲಿ ಸೀಮೆ ಎಣ್ಣೆ ಬಳಕೆ ಮಾಡದಿರುವ ದೇಶವನ್ನು ಅಭಿವೃದ್ಧಿ ಹೊಂದಿದ ದೇಶ ಎಂದು ಪರಿಗಣಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೀಮೆಎಣ್ಣೆ ಮುಕ್ತ ದೇಶ ಮಾಡಲು ಸರ್ಕಾರ ಮುಂದಾಗಿದೆ ಎಂದರು.
ಪಡಿತರದಲ್ಲಿ ಪಾಮ್ ಆಯಿಲ್ ಎಣ್ಣೆ ನೀಡಲಾಗುತ್ತಿದೆ. ಆದರೆ ಕೆಲವರು ಬಳಕೆ ಮಾಡದಿರುವುದು ಕಂಡುಬಂದಿದೆ. ಪಾಮ್ ಆಯಿಲ್ ಬದಲಿಗೆ ಸೂರ್ಯ ಕಾಂತಿ ರೀಪೈನ್ಡ್ ಎಣ್ಣೆ ನೀಡಲಾಗುವುದು ಎಂದರು.
ಕೇಂದ್ರ ಸರ್ಕಾರದ ಉಜ್ವಲ್ ಯೋಜನೆ ಅಡಿಯಲ್ಲಿ ಗ್ಯಾಸ್ ಸಂಪರ್ಕ ಪಡೆಯಲು 4 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಕೇಂದ್ರ ಸರ್ಕಾರ ಇನ್ನೂ ಗ್ಯಾಸ್ ಸಂಪರ್ಕ ನೀಡಿಲ್ಲ. ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ. ಅಲ್ಲದೇ, ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಫಲಾನುಭವಿಗಳಿಗೆ ಗ್ಯಾಸ್ ಸ್ಟೌ ನೀಡುತ್ತಿಲ್ಲ. ಇದು ಜನರಿಗೆ ಸಮಸ್ಯೆ ಆಗಿದೆ. ಹೀಗಾಗಿ ಜನರಿಗೆ ಉಚಿತವಾಗಿ ಗ್ಯಾಸ್ ಸ್ಟೌ ವಿತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.