ತೋವಿನಕೆರೆ: ಹೋಬಳಿಯ ಹೂವಿನ ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದು ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದ್ದಾರೆ. ಕುಸಿದಿದ್ದ ಹೂವಿನ ಬೆಲೆ ಆಶಾವಾದ ಎನ್ನುವಂತೆ ಕಳೆದ ಒಂದು ವಾರದಲ್ಲಿ ಚೇತರಿಕೆ ಕಂಡಿದೆ. ಆದರೆ ಬೆಳೆ ಮಾತ್ರ ಅಂತಿಮ ಹಂತದಲ್ಲಿದ್ದು ಹೆಚ್ಚು ಬೆಲೆ ಸಿಕ್ಕರೂ ರೈತರಿಗೆ ಲಾಭವಾಗುತ್ತಿಲ್ಲ. ಬಿಸಿಲು ಹೆಚ್ಚಿರುವುದರಿಂದ ಹೂವಿನ ಇಳುವರಿ ಹೆಚ್ಚಿದೆ.
ಗರಿಷ್ಠ ಮುಖಬೆಲೆ ನೋಟುಗಳ ಅಮಾನ್ಯೀಕರಣವೂ ಹೂವಿನ ಬೆಲೆ ಕುಸಿಯಲು ಕಾರಣವಾಗಿತ್ತು. ಸೇವಂತಿಗೆ, ಕನಕಾಂಬರ ಇತ್ಯಾದಿ ಹೂವು ಒಂದು ಕೈ ಹೂವಿನ (10 ಮಾರು) ಬೆಲೆ ಈ ಮೊದಲು ₹ 100ಕ್ಕಿಂತ ಕಡಿಮೆ ಇತ್ತು. ಆದರೆ ಕಳೆದ ಒಂದು ವಾರದಿಂದ ಹೂವಿನ ಬೆಲೆ ₹ 700 ದಾಟಿದೆ.
‘₹ 80 ಸಾವಿರ ಖರ್ಚು ಮಾಡಿ ಬಟನ್ಸ್ ಹೂ ಬೆಳೆದಿದ್ದೆ. ಲಕ್ಷಾಂತರ ರೂಪಾಯಿ ಲಾಭ ನಿರೀಕ್ಷಿಸಿದ್ದೆ’ ಎನ್ನುವರು ಜೋನಿಗರಹಳ್ಳಿಯ ರೈತ ಮಹಿಳೆ ಮೀನಾಕ್ಷಮ್ಮ.
‘ನಮ್ಮ ಹಳ್ಳಿಯಲ್ಲಿ ಬೆಳೆದಿದ್ದ ಸುಮಾರು ಐವತ್ತು ಎಕರೆ ಹೂ ಗಿಡಗಳು ಒಣಗುತ್ತಿವೆ. ಮಾರಾಟಕ್ಕೆ ಪ್ರಯತ್ನಿಸಿದರೆ ಕೂಲಿಯೂ ದೊರೆಯುವುದಿಲ್ಲ. ಹಣ ಎಷ್ಟು ಸಿಕ್ಕರೂ ಪರವಾಗಿಲ್ಲ ಎಂದು ಹೂ ಕೀಳುತ್ತಿದ್ದೇವೆ.ಈ ಮುಂಚೆ ತುಮಕೂರು ಮಾರುಕಟ್ಟೆಗೆ ಹೆಚ್ಚು ಹೂ ಪೂರೈಸುತ್ತಿದ್ದೆವು. ಈಗ ಬೆಂಗಳೂರು ಮಾರುಕಟ್ಟೆ ಪೂರೈಕೆಯಾಗುತ್ತಿದೆ’ ಎಂದು ಅಳಲು ತೋಡಿಕೊಳ್ಳುವರು.
ಹೆಚ್ಚಿನ ರೈತರು ಹೂವಿನ ಸಮೇತ ಗಿಡಗಳನ್ನು ಕಟಾವು ಮಾಡಿದ್ದಾರೆ. ಆದರೆ ಬಟನ್ಸ್, ಸೇವಂತಿಗೆ ಹೂವಿನ ಬೆಲೆ ಕಳೆದ ವಾರದಿಂದ ಏಕಾಏಕಿ ಹೆಚ್ಚಿದೆ. ಹೂ ಬೆಳೆಗಾರರು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದು ಸರ್ಕಾರ ನೆರವಿಗೆ ಬರಬೇಕು ಎಂದು ರೈತರು ಆಗ್ರಹಿಸಿದ್ದಾರೆ.