ಕನಕಪುರ: ಕೆಚ್ಚೆದೆಯ ಯುವಕರು ಮಾತ್ರ ಈ ದೇಶದ ಭವಿಷ್ಯವನ್ನು ಬದಲಿಸಬಲ್ಲರೆಂದು ಸ್ವಾಮಿ ವಿವೇಕಾನಂದರು ಮನಗಂಡಿದ್ದರು ಎಂದು ರೂರಲ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ತಿಮ್ಮೇಗೌಡ ತಿಳಿಸಿದರು.
ನಗರದ ಬೂದಿಗುಪ್ಪೆ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವೇಕಾನಂದ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಮಾತಾನಾಡಿದರು.
ಸ್ವಾಮಿ ವಿವೇಕಾನಂದರು ಅಮೆರಿಕಾದ ಚಿಕಾಗೋ ಸಮ್ಮೇಳನದಲ್ಲಿ ಭಾರತ ದೇಶದಲ್ಲಿನ ಬಡವರನ್ನು ನೆನೆದು ನೆಲದ ಮೇಲೆ ಮಲಗಿದರು. ಆದರೆ ಇಂದಿನ ಜನನಾಯಕರು ಅದಕ್ಕೆ ತದ್ವಿರುದ್ಧವಾಗಿದ್ದಾರೆ. ಯುವಜನತೆ ವಿವೇಕಾನಂದರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ ಕಂಡ ಕನಸನ್ನು ನನಸು ಮಾಡಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರ ಪ್ರಾಂಶುಪಾಲ ವೃಷಭೇಂದ್ರ ಮೂರ್ತಿ ಮಾತನಾಡಿ ದೇಶದ ಭವಿಷ್ಯ ಯುವಶಕ್ತಿಯ ಮೇಲೆ ನಿಂತಿದೆ ಎಂದು ಜಗತ್ತಿಗೆ ಸಾರಿದವರು ಸ್ವಾಮಿ ವಿವೇಕಾನಂದರು. ಯುವಶಕ್ತಿಯ ಮೇಲೆ ಅಷ್ಟೊಂದು ನಂಬಿಕೆಯಿಟ್ಟಿದ್ದರು, ಒಡೆದ ಮನಸ್ಸುಗಳನ್ನು ಕೂಡಿಸಿ, ಭ್ರಾತೃತ್ವವನ್ನು ಬೆಳೆಸುವಂತೆ ಮಾಡುವ ಸಂದೇಶಗಳನ್ನು ಅವರು ತಿಳಿಸಿದ್ದಾರೆ ಎಂದರು.
ವಿದ್ಯಾರ್ಥಿಗಳು ಬೂದಿಗುಪ್ಪೆ ಗ್ರಾಮದಲ್ಲಿ ಜಾಥಾ ನಡೆಸಿ ವಿವೇಕಾನಂದರ ಸಂದೇಶಗಳನ್ನು ಕೂಗಿದರು. ಕಾಲೇಜಿನಲ್ಲಿ 7 ದಿನ ರಾಷ್ಟ್ರೀಯ ಯುವ ಸಪ್ತಾಹವನ್ನು ಆಚರಣೆ ಮಾಡುವುದಾಗಿ ಹೇಳಿದರು.
ವಿವೇಕಾನಂದರ ಕುರಿತು ಪ್ರಬಂಧ ಸ್ಪರ್ಧೆ, ಚರ್ಚಾಸ್ಪರ್ಧೆ, ರಸ ಪ್ರಶ್ನೆ, ಕಾಲೇಜಿನಲ್ಲಿ ಸ್ವಚ್ಛತೆ ಮಾಡುವುದು ಮುಂದಾತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರದ ಸಂಚಾಲಕಿ ಶಶಿಕಲಾ.ಎ.ಎಸ್, ರಾಷ್ಟ್ರೀಯ ಯುವ ಸಪ್ತಾಹ ಸಂಚಾಲಕ ಮುಜೀಬ್ ಖಾನ್. ಉಪನ್ಯಾಸಕರಾದ ಮಂಜುನಾಥ್, ನಟೇಶ್ ಬಾಬು, ಪ್ರದೀಪ್ ಮತ್ತಿತರರು ಹಾಜರಿದ್ದರು.