ರಾಮನಗರ: ಇಲ್ಲಿನ ಜಿಲ್ಲಾ ಕೇಂದ್ರದಿಂದ ರಾಜಧಾನಿಗೆ ಹೆಚ್ಚುವರಿ ರೈಲು ಸೇವೆಗೆ ಸೋಮವಾರ ಚಾಲನೆ ದೊರೆಯಿತು.
ಟ್ರಾಫಿಕ್ನ ಸಮಸ್ಯೆ ಹೊರತಾಗಿ ಬೆಂಗಳೂರು ನಗರ ಕೇಂದ್ರವನ್ನು ತ್ವರಿತವಾಗಿ ತಲುಪಲು ಇಚ್ಛಿಸುವ ಜನರಿಗೆ ಈ ಸೇವೆಯಿಂದ ಹೆಚ್ಚಿನ ಅನುಕೂಲವಾಗಲಿದೆ.
ರಾಮನಗರದಿಂದ ಬೆಂಗಳೂರಿಗೆ ಹೊರಟ ಮೈನ್ಲೈನ್ ಎಲೆಕ್ಟ್ರಿಕಲ್ ಮಲ್ಟಿಪಲ್ ಯೂನಿಟ್ (ಮೆಮು) ರೈಲಿಗೆ ನಗರದ ನಾಗರಿಕರು ಸೋಮವಾರ ರೈಲ್ವೆ ನಿಲ್ದಾಣದಲ್ಲಿ ಪೂಜೆ ಸಲ್ಲಿಸಿ ಬೀಳ್ಕೊಟ್ಟರು. ನಂತರ ಸಿಹಿ ಹಂಚಿ ಸಂಭ್ರಮಿಸಿದರು.
ಸಂಭ್ರಮಾಚರಣೆಯಲ್ಲಿ ಕನ್ನಡ ಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಭಾಗದ ಬಹುದಿನಗಳ ಕನಸು ಈಡೇರಿದಂತೆ ಆಗಿದೆ ಎಂದು ಸಂಭ್ರಮ ಹಂಚಿಕೊಂಡರು.
ರೈಲ್ವೆ ಬೋರ್ಡಿನ ಸದಸ್ಯ ಜಿ.ವಿ. ಪದ್ಮನಾಭ್, ನಗರಸಭಾ ಸದಸ್ಯ ಎ.ರವಿ. ಮಾಜಿ ಸದಸ್ಯ ಸೋಮಶೇಖರ್, ಬಿಜೆಪಿ ವಕ್ತಾರ ರುದ್ರದೇವರು, ಮುಖಂಡರಾದ ಚನ್ನಕೇಶವ, ಸಿ.ಕೆ. ನಾಗರಾಜ್, ರಾಮಣ್ಣ, ರಾಮಾಂಜನೇಯ, ಚನ್ನಪ್ಪ, ಲೋಕೇಶ್, ಚಂದನ್ ಮೋರೆ, ಬದ್ರಿನಾಥ್, ಮಂಜು, ಕರುನಾಡಸೇನೆಯ ಪದಾಧಿಕಾರಿಗಳಾದ ಎಂ. ಜಗದೀಶ್, ಗಾಯಿತ್ರಿಬಾಯಿ, ಜಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.