ರಾಮನಗರ: ಜಿಲ್ಲೆಯ ಮೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಇಂದು (ಜ.17) ಚುನಾವಣೆ ನಡೆಯಲಿದೆ. ಬೆಳಿಗ್ಗೆ 8ರಿಂದ ಸಂಜೆ 5ರವರೆಗೂ ಮತದಾನಕ್ಕೆ ಅವಕಾಶವಿದೆ.
ರಾಮನಗರ, ಚನ್ನಪಟ್ಟಣ, ಕನಕಪುರ ಎಪಿಎಂಸಿಗಳ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗಾಗಿ ಈ ಚುನಾವಣೆ ನಿಗದಿಯಾಗಿದೆ. ಇದಕ್ಕಾಗಿ ಸ್ಥಳೀಯ ಆಡಳಿತವು ಸೂಕ್ತ ವ್ಯವಸ್ಥೆ ಮಾಡಿಕೊಂಡಿದೆ.
ಸೋಮವಾರ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಕಾರ್ಯವು ನಡೆಯಿತು. ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿ ತಹಶೀಲ್ದಾರ್ ಕಚೇರಿಯಲ್ಲಿ ಹಾಜರಾಗಿ, ಮತದಾನಕ್ಕೆ ಅವಶ್ಯವಾದ ಸಾಮಗ್ರಿ ಪಡೆದು ಮತಗಟ್ಟೆಗಳತ್ತ ತೆರಳಿದರು. ಸಿಬ್ಬಂದಿ ಮತಗಟ್ಟೆಗಳಿಗೆ ಕರೆದೊಯ್ಯಲು ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು.
ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ ಹಾಗೂ ಮೂವರು ಮತಗಟ್ಟೆ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೃಷಿಕರ ಕ್ಷೇತ್ರದ ಮತದಾರರಿಗೆ ಎಡಗೈಯ ಮಧ್ಯದ ಬೆರಳಿಗೆ ಮತ್ತು ವರ್ತಕರ ಕ್ಷೇತ್ರದ ಮತದಾರರಿಗೆ ಎಡಗೈಯ ತೋರು ಬೆರಳಿಗೆ ಶಾಹಿ ಹಚ್ಚಲಾಗುತ್ತದೆ.
18ರ ಬೆಳಗ್ಗೆ 8 ರಿಂದ ಸಂಜೆ 4ರ ವರೆಗೆ ಅವಶ್ಯವಿದ್ದಲ್ಲಿ ಮರುಮತದಾನ ನಡೆಯಲಿದೆ. 19ರಂದು ಬೆಳಗ್ಗೆ 8 ರಿಂದ ತಾಲ್ಲೂಕು ಕೇಂದ್ರದಲ್ಲಿ ಮತ ಎಣಿಕೆ ಕಾರ್ಯ ನಿಗದಿಯಾಗಿದೆ. ಮತಗಟ್ಟೆಗೆ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.
ಆಕ್ಷೇಪ: ‘ರಾಮನಗರ ತಾಲ್ಲೂಕಿನ ವರ್ತಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲವು ಮಾರ್ಪಾಡುಗಳನ್ನು ಕೋರಿ ಕ್ಷೇತ್ರದ ಕೆಲವು ಮುಖಂಡರು ಸೋಮವಾರ ತಹಶೀಲ್ದಾರ್ ರಘುಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
‘ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 440 ಮತಗಳಿವೆ. ಕೆಲವರು ಮತಪಟ್ಟಿಯಲ್ಲಿ ಬದಲಾವಣೆ ಮಾಡುತ್ತಿದ್ದಾರೆ. ಅಲ್ಲದೆ ತಾಲ್ಲೂಕು ಆಡಳಿತ ಸೂಚಿಸಿರುವ ಭಾವಚಿತ್ರದೊಂದಿಗೆ ಇರುವ ದಾಖಲೆ ನೀಡಿ ಮತ ಹಾಕಲು ಕಷ್ಟವಾಗುತ್ತದೆ. ಹೀಗಾಗಿ ಈ ಬಗ್ಗೆ ಪರಿಶೀಲನೆ ನಡೆಸಬೇಕು’ ಕೋರಿದರು. ಈ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಜರುಗಿಸುವುದಾಗಿ ತಹಶೀಲ್ದಾರ್ ಭರವಸೆ ನೀಡಿದರು.