ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ಮಿತಿಮೀರಿದ ವಾಯುಮಾಲಿನ್ಯ ಕಂಡು ದೇಶದ ಜನ ತೀವ್ರ ಕಳವಳಕ್ಕೀಡಾಗಿದ್ದರು. ಇದೀಗ ಕರ್ನಾಟಕದ ಹೃದಯ ಭಾಗವಾದ ದಾವಣಗೆರೆ, ರಾಜಧಾನಿಗೆ ಸಮೀಪದ ತುಮಕೂರು, ಉತ್ತರ ಕರ್ನಾಟಕದ ಹುಬ್ಬಳ್ಳಿ, ರಾಯಚೂರು ನಗರಗಳಲ್ಲಿ ವಾಯುಮಾಲಿನ್ಯ ಮಿತಿ ಮೀರಿರುವ ವರದಿ ನೋಡಿ (ಪ್ರ.ವಾ., ಜ. 11) ಇನ್ನಷ್ಟು ಆತಂಕವಾಗಿದೆ.
ದೆಹಲಿಯ ವಾಯುಮಾಲಿನ್ಯಕ್ಕೆ ಪರಿಹಾರವಾಗಿ ಸಮ- ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮ ಪ್ರಾಯೋಗಿಕವಾಗಿ ಜಾರಿಗೆ ಬಂದಿತ್ತು. ಆದರೆ ನಮ್ಮ ಸರ್ಕಾರ ಯಾವ ಪರಿಹಾರ ಸೂತ್ರ ರೂಪಿಸಲಿದೆ? ಕೆಲವು ಬೃಹತ್ ನಗರಗಳಿಗೆ ಹೋಲಿಸಿದರೆ ನಮ್ಮ ಈ ನಗರಗಳಲ್ಲಿ ಜನಸಂಖ್ಯೆ, ವ್ಯಾಪ್ತಿ ಮತ್ತು ವಾಹನಗಳ ಸಂಖ್ಯೆ ಕಡಿಮೆ ಇದೆ. ಆದರೂ ವಾಯುಮಾಲಿನ್ಯ ವಿಪರೀತವಾಗಿ ಹೆಚ್ಚಿರುವುದಕ್ಕೆ ಸೂಕ್ತ ಕಾರಣಗಳನ್ನು ಗುರುತಿಸಬೇಕು. ಅದಕ್ಕೆ ತಕ್ಕಂತೆ ಸರ್ಕಾರ ಜನರ ಸಹಭಾಗಿತ್ವದಲ್ಲಿ ಈ ಗಂಭೀರ ಸಮಸ್ಯೆಯನ್ನು ನಿವಾರಿಸಲು ಮುಂದಡಿ ಇಡಬೇಕು.
-ಫಾಜಿಲ್ ಅಹ್ಮದ್ ಹೊದಿಗೆರೆ, ಹರಿಹರ