ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣದ ಆರೋಪಿಗಳಾದ ಇಂದ್ರಾಣಿ ಮುಖರ್ಜಿ, ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಮತ್ತು ಆಕೆಯ ಮಾಜಿ ಪತಿ ಸಂಜೀವ್ ಖನ್ನಾ ವಿರುದ್ಧ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ದೋಷಾರೋಪ ನಿಗದಿ ಮಾಡಿದೆ. ಈ ಪ್ರಕರಣದ ಫೆಬ್ರುವರಿ 1ರಿಂದ ಆರಂಭವಾಗಲಿದೆ.
ಪೀಟರ್ ಅವರಿಂದ ವಿಚ್ಛೇದನ ಪಡೆಯುವ ಇಚ್ಛೆಯನ್ನು ಇಂದ್ರಾಣಿ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ತಾವು ಮಧ್ಯಪ್ರವೇಶ ಮಾಡಲಾಗದು ಎಂದು ನ್ಯಾಯಾಧೀಶ ಎಚ್.ಎಸ್. ಮಹಾಜನ್ ಹೇಳಿದರು.
ಮೂರೂ ಜನ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 120ಬಿ (ಪಿತೂರಿ), ಸೆಕ್ಷನ್ 320 (ಕೊಲೆ) ಸೇರಿದಂತೆ ಇತರ ಆರೋಪಗಳನ್ನು ನಿಗದಿ ಮಾಡಲಾಗಿದೆ. ತಾವು ತಪ್ಪು ಮಾಡಿಲ್ಲ ಎಂದು ಮೂರು ಜನ ನ್ಯಾಯಾಲಯದಲ್ಲಿ ಹೇಳಿದರು.
ಶೀನಾ ಅವರನ್ನು 2012ರ ಏಪ್ರಿಲ್ 24ರಂದು ಕೊಲೆ ಮಾಡಿ, ಸಮೀಪದ ರಾಯಗಡ ಅರಣ್ಯದಲ್ಲಿ ದೇಹವನ್ನು ಮಾರನೆಯ ದಿನ ಸುಟ್ಟುಹಾಕಲಾಗಿದೆ ಎಂಬುದು ಪೊಲೀಸರ ಆರೋಪ. ಶೀನಾ ಅವರ ಸಹೋದರ ಮಿಖಾಯಿಲ್ ಬೋರಾ ಅವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪ ಇಂದ್ರಾಣಿ ಮತ್ತು ಸಂಜೀವ್ ವಿರುದ್ಧ ಹೊರಿಸಲಾಗಿದೆ.