ಆಲಮಟ್ಟಿ(ನಿಡಗುಂದಿ): ‘ಜಗತ್ತಿನಲ್ಲಿ ಜಾನ ಹಾಗೂ ಸೃಜನಾತ್ಮಕತೆಗೆ ಹೆಚ್ಚಿನ ಮಹತ್ವವಿದ್ದು, ಆ ಜ್ಞಾನವನ್ನು ಜನರಿಗೆ ಗ್ರಂಥಾಲಯಗಳು ಒದಗಿಸುತ್ತವೆ. ಯುವಕರು ಪಠ್ಯ ಪುಸ್ತಕಗಳ ಜೊತೆಗೆ ಪಠ್ಯೇತರ ಪುಸ್ತಕಗಳನ್ನು ಸಹ ಓದಿ ಕೊಂಡು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳ ಬೇಕು’ ಎಂದು ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.
ಅವರು ವಿಜಯಪುರ ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ಆಲಮಟ್ಟಿ ಡ್ಯಾಂ ಸೈಟ್ ಶಾಖಾ ಗ್ರಂಥಾಲಯ ಸಹಯೋಗ ದಲ್ಲಿ ಸ್ಥಳೀಯ ಮಂಜಪ್ಪ ಹರ್ಡೇಕರ್ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ ಗ್ರಂಥಾಲಯ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ಗಾಂಧಿ ಫಿಲಾಸಾಫಿಕಲ್ ಫೋರಂನ ಸಂಚಾಲಕ ನೀಲೇಶ್ ಬೇನಾಳ್ ಮಾತನಾಡಿ, ‘ಮೈಮೇಲೆ ಹರಕು ಬಟ್ಟೆ ಇದ್ರು ಪರವಾಗಿಲ್ಲ, ಕೈಯ್ಯಲ್ಲೊಂದು ಒಳ್ಳೆಯ ಪುಸ್ತಕವಿರಲಿ, ಒಬ್ಬ ಒಳ್ಳೆಯ ಸ್ನೇಹಿತನ ಸ್ಥಾನವನ್ನು ಒಂದೊಳ್ಳೆಯ ಪುಸ್ತಕ ತುಂಬುತ್ತದೆ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದಾರೆ. ಈ ಮಾತನ್ನು ಯುವಜನತೆ ಸದಾ ನೆನಪಿನಲ್ಲಿಟ ್ಟುಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು’ ಎಂದರು.
ಶಿಕ್ಷಕ ಎನ್.ಎಸ್. ಬಿರಾದಾರ, ಸ್ವಾಮಿ ವಿವೇಕಾನಂದ ಕುರಿತು ಉಪನ್ಯಾಸ ನೀಡಿದರು. ಗ್ರಂಥಪಾಲಕ ಪರಶುರಾಮ ಮೂಲಂಗಿ, ಎ.ಎಸ್. ಬಿಲವಾಡ ಮಾತನಾಡಿದರು.
ಮುಖ್ಯ ಶಿಕ್ಷಕ ಎಸ್.ಬಿ. ನಾಗೂರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಮೊದಲು ವೇದಿಕೆ ಮೇಲಿದ್ದ ಗಣ್ಯ-ಮಾನ್ಯರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಯು.ಎ. ಹಿರೇಮಠ, ಜಿ.ಎಮ್, ಹಿರೇಮಠ, ಕಿರಣ್, ಜಗದೇವಿ ಹಿರೇಮಠ, ಶಶಿಕಲಾ ಹಿರೇಮಠ, ರೇಣುಕಾ ಮಲಘಾಣ ಸೇರಿದಂತೆ ಮತ್ತೀತರರು ಇದ್ದರು. ಜಿ.ಎಮ್. ಕೋಟ್ಯಾಳ ಸ್ವಾಗತಿಸಿದರು. ಮಹೇಶ್ ಗಾಳಪ್ಪಗೋಳ ನಿರೂಪಿಸಿದರು. ಎಮ್.ಎಚ್. ಬಳಬಟ್ಟಿ ವಂದಿಸಿದರು.