ಮುಳಬಾಗಿಲು: ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಎಸ್ಸಿಸಿ ಘಟಕದ ಮುಖ್ಯಸ್ಥ ಮುನಿರಾಜು ಹೇಳಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಎಸ್ಸಿಸಿ, ರೇಂಜರ್ಸ್ ಮತ್ತು ರೋವರ್ಸ್ ಘಟಕ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ಜನ್ಮ ದಿನೋತ್ಸವ, ಯುವ ಸಪ್ತಾಹ ಮತ್ತು ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪದವಿ ವಿದ್ಯಾರ್ಥಿಗಳಲ್ಲಿ ಅಪಾರ ಜ್ಞಾನ ಸಂಪತ್ತು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಆಸಕ್ತಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ಕೀಳರಿಮೆ ತೊಲಗಿ ಸಮಾಜ ಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪಠ್ಯೇತರ ಚಟುವಟಿಕೆಗಳಲ್ಲಿ ಪ್ರಯೋಗಾಕಾತ್ಮಕವಾಗಿ ತೊಡಗಿಕೊಂಡರೆ ವಿದ್ಯಾರ್ಥಿಗಳು ಮತ್ತಷ್ಟು ಜ್ಞಾನ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಎನ್ಸಿಸಿ ಕಾರ್ಯ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ವಾಮಿ ವಿವೇಕಾನಂದರು ಯುವ ಜನತೆಗೆ ಒಬ್ಬ ಮಾರ್ಗದರ್ಶಕರಾಗಿ, ಸ್ಪೂರ್ತಿದಾಯಕರಾಗಿ ಕಾಣಿಸುತ್ತಾರೆ. ಯುವ ಶಕ್ತಿಯ ಬಲಿಷ್ಠ ರಾಷ್ಟ್ರವನ್ನು ಕಟ್ಟುವ ಕನಸು ಹೊಂದಿದ್ದ ವಿವೇಕರ ಆದರ್ಶ ತತ್ವಗಳನ್ನು ಪಾಲಿಸಲು ಯುವಕರು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಿದರು. ರೋವರ್ ಅಂಡ್ ರೇಜಂರ್ಸ್ ಅಧಿಕಾರಿ ಜಿ.ಮೋಹನ್ರೆಡ್ಡಿ, ರೆಡ್ ಕ್ರಾಸ್ ಸಂಯೋಜಕ ಜಿಯಾವುಲ್ಲಾ, ಪೊಲೀಸ್ ಅಧಿಕಾರಿ ಅಮರ್ನಾಥ್ ಮತ್ತಿತರರು ಹಾಜರಿದ್ದರು.