ಮುಂಡಗೋಡ: 28ನೇ ರಾಷ್ಟ್ರೀಯ ಸುರಕ್ಷತಾ ಸಪ್ತಾಹದ ಅಂಗವಾಗಿ ಶಿರಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೇತೃತ್ವದಲ್ಲಿ ಪಟ್ಟಣದಲ್ಲಿ ಜಾಥಾ ನಡೆಸಿ ವಾಹನ ಚಾಲಕರಲ್ಲಿ ತಿಳಿವಳಿಕೆ ಮೂಡಿಸಲಾಯಿತು.
ಇಲ್ಲಿಯ ಪೊಲೀಸ್ ಠಾಣೆಯ ಆವರಣದಲ್ಲಿ ಜಾಥಾಕ್ಕೆ ತಹಶೀಲ್ದಾರ್ ಅಶೋಕ ಗುರಾಣಿ ಚಾಲನೆ ನೀಡಿದರು. ವಿದ್ಯಾರ್ಥಿಗಳು, ಚಾಲಕರು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಯ ಸಿಬ್ಬಂದಿ ಪಾಲ್ಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ವಾಹನ ಸವಾರರಿಗೆ ಗುಲಾಬಿ ಹೂ ನೀಡಿ, ರಸ್ತೆ ನಿಯಮಗಳನ್ನು ಪಾಲಿಸುತ್ತ, ಸುರಕ್ಷಿತ ಪ್ರಯಾಣ ನಡೆಸುವಂತೆ ಮನವಿ ಮಾಡಲಾಯಿತು.
ಜಾಥಾದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ರಸ್ತೆ ಸುರಕ್ಷತೆಯ ಭಿತ್ತಿಪತ್ರಗಳನ್ನು ಹಿಡಿದುಕೊಂಡು, ವಾಹನ ಚಾಲಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದರು.
ಸಾರಿಗೆ ಅಧಿಕಾರಿ ಸಿ.ಡಿ.ನಾಯ್ಕ, ಸಿಪಿಐ ಕಿರಣಕುಮಾರ ನಾಯಕ, ಪಿಎಸ್ಐ ಲಕ್ಕಪ್ಪ ನಾಯ್ಕ, ಟೆಂಪೊ ಚಾಲಕ, ಮಾಲಕ ಸಂಘದ ಸದಸ್ಯರು, ಲಾರಿ ಹಾಗೂ ಆಟೋ ಚಾಲಕ,ಮಾಲಕ ಸಂಘದವರು ಉಪಸ್ಥಿತರಿದ್ದರು.