ಬಾಗಲಕೋಟೆ: ಎಪಿಎಂಸಿ ಚುನಾವಣೆ ಯಲ್ಲಿ ತಾಲ್ಲೂಕಿನ ಶಿರೂರು, ಬೇವೂರು ಹಾಗೂ ಬಮ್ಮಣಗಿ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸೋಲು ಅನು ಭವಿಸಲು ಚುನಾವಣಾ ಅಧಿಕಾರಿ ಯಾಗಿದ್ದ ತಹಶೀಲ್ದಾರ್ ನೇರ ಹೊಣೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆರೋಪಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣಿಕೆ ವೇಳೆ ಅಭ್ಯರ್ಥಿಗಳ ಹಾದಿ ತಪ್ಪಿಸಿ ಅನ್ಯಾಯ ಮಾಡಲಾಗಿದೆ. ಇದ ರಿಂದ ಶಿರೂರು ಕ್ಷೇತ್ರದ ಅಭ್ಯರ್ಥಿ ಎರಡು ಮತಗಳಿಂದ ಹಾಗೂ ಬೇವೂರು ಕ್ಷೇತ್ರದ ಅಭ್ಯರ್ಥಿ ಕೇವಲ ಏಳು ಮತಗಳ ಅಂತರದಿಂದ ಸೋಲು ಅನುಭವಿಸ ಬೇಕಾಯಿತು. ಮರು ಎಣಿಕೆಗೆ ಮನವಿ ಮಾಡಿದರೂ ಅದಕ್ಕೆ ಮನ್ನಣೆ ನೀಡದ ತಹಶೀಲ್ದಾರ್ ದರ್ಪದಿಂದ ವರ್ತಿಸಿದ್ದಾರೆ ಜೊತೆಗೆ ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದು ಹೇಳಿದ್ದಾಗಿ ಚರಂತಿ ಮಠ ತಿಳಿಸಿದರು.
ಮತ ಎಣಿಕೆ ವೇಳೆ ಸ್ವತಃ ಶಾಸಕ ಎಚ್.ವೈ.ಮೇಟಿ ಹಳೆಯ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿ ಅಕ್ರಮ ನಡೆಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ ಚರಂತಿಮಠ, ಇನ್ನೂ 50 ವರ್ಷ ಅವರೇ ಆಡಳಿತ ನಡೆಸಲಿದ್ದಾರೆ ಎಂಬ ಭ್ರಮೆ ಬೇಡ. ಅಧಿಕಾರಿಗಳು ದುರಹಂಕಾರದ ವರ್ತನೆ ಬಿಟ್ಟು ನಡವಳಿಕೆ ತಿದ್ದಿಕೊಳ್ಳಲಿ ಇಲ್ಲದಿದ್ದರೆ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ಚುನಾವಣೆ ಪ್ರಚಾರದ ವೇಳೆ ನನ್ನ ಮೇಲೆ ಬಂದಿರುವ ಕಳಂಕ ಹೋಗ ಬೇಕಾದರೆ ಕಾಂಗ್ರೆಸ್ ಪರವಾಗಿ ಮತ ದಾನ ಮಾಡಿ ಎಂದು ಶಾಸಕರು ಹೇಳಿ ದ್ದಾರೆ. ಮತ ಹಾಕಿದ ಕೂಡಲೇ ಮಾಡಿದ ಪಾಪ ಹೋಗಲಿದೆ ಎಂದು ಅವರು ತಿಳಿದಂತಿದೆ ಎಂದು ಲೇವಡಿ ಮಾಡಿದ ಚರಂತಿಮಠ, ಬಿಜೆಪಿ ಕೂಡ ಪ್ರಚಾರದ ವೇಳೆ ಸಿಡಿ ವಿಚಾರ ಪ್ರಸ್ತಾಪಿ ಸದೇ ಸಂಯಮ ಕಾಯ್ದುಕೊಂಡಿತು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ ದರು.
ಮತ ಪ್ರಮಾಣ ಹೆಚ್ಚಳ: ‘ಬಾಗಲಕೋಟೆ ಎಪಿಎಂಸಿಯ 13 ಸ್ಥಾನಗಳ ಪೈಕಿ ಒಂದು ಟಿಎಪಿಎಂಎಸ್ ಕ್ಷೇತ್ರಕ್ಕೆ ಅವರು ಮೊದಲೇ ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದ್ದರು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 12 ಸ್ಥಾನಗಳ ಪೈಕಿ ಬಿಜೆಪಿ ಕೂಡ ಆರು ಸ್ಥಾನ ಗೆದ್ದಿದೆ. ಹಾಗಾಗಿ ಇಲ್ಲಿ ಹಿನ್ನಡೆಯ ಪ್ರಶ್ನೆ ಇಲ್ಲ’ ಎಂದು ಹೇಳಿದ ಚರಂತಿಮಠ, ‘ಈ ಚುನಾವಣೆಯಲ್ಲಿ ಬಿಜೆಪಿಗೆ ದೊರೆತಿರುವ ಶೇಕಡಾವಾರು ಮತ ಪ್ರಮಾಣವೂ ಹೆಚ್ಚಳವಾಗಿದೆ. ಕಾಂಗ್ರೆಸ್ಗೆ 11,004 ಮತಗಳು ಬಂದಿದ್ದರೆ, ಬಿಜೆಪಿಗೆ 11, 310 ಮತಗಳು ಬಿದ್ದಿವೆ’ ಎಂದು ತಿಳಿಸಿದರು.
ಹುಣ್ಣಿಮೆಯ ದಿನ ಬಿಜೆಪಿಯ ಹೆಚ್ಚಿನ ಮತದಾರರು ಬನಶಂಕರಿ, ಸವ ದತ್ತಿ ಯಲ್ಲಮ್ಮನ ಜಾತ್ರೆ ಹಾಗೂ ಶಬರಿಮಲೆ ಅಯ್ಯಪ್ಪ ಸ್ವಾಮಿ ಯಾತ್ರೆಗೆ ತೆರಳಿದ್ದರು. ಅದೇ ದಿನ ಮತದಾನಕ್ಕೆ ದಿನ ನಿಗದಿಗೊಳಿಸಿದ್ದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಬರಲಿಲ್ಲ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.