ಬಾಗಲಕೋಟೆ: ಸ್ವಾಮಿ ವಿವೇಕಾನಂದರ ತತ್ವಗಳು ಇಂದಿನ ಯುವಕರಿಗೆ ಪ್ರೇರಣೆ. ಅವರು ನೀಡಿರುವ ತತ್ವಗಳಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ಎಬಿವಿಪಿ ಪ್ರಾಂತ ಸಹ ಸಂಘ ಟನಾ ಕಾರ್ಯದರ್ಶಿ ವೆಂಕಟೇಶ ಕೆ. ವಲಾದೂರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವಿದ್ಯಾಗಿರಿಯ ಬಸವೇಶ್ವರ ಎಂಬಿಎ ಕಾಲೇಜಿನ ಸಭಾಂಗಣದಲ್ಲಿ ಎಬಿವಿಪಿ ನಗರ ಶಾಖಾ ವತಿಯಿಂದ ಮಂಗಳವಾರ ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ 154ನೇ ಜಯಂತ್ಯುತ್ಸವದ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.
ಅವರ ಸೂಜಿಗಲ್ಲಿನ ಮೊನಚಾದ ವ್ಯಕ್ತಿತ್ವ. ಎಲ್ಲರ ಮೇಲೆ ಬಹು ವ್ಯಕ್ತಿತ್ವ ಹೊಂದಿದೆ. ವಿಶ್ವವೇ ನನ್ನ ಕುಟುಂಬ ಎಂದು ತಿಳಿದು ಆದರ್ಶ ಜೀವನ ನಡೆಸಿ ದವರು. ಅಂತವರ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನೂದ್ದಕ್ಕೂ ಅಳವಡಿಸಿಕೊಳ್ಳಬೇಕು. ಯುವಕರಲ್ಲಿ ಆತ್ಮವಿಶ್ವಾಸ, ಪ್ರಾಮಾಣಿಕತೆ, ಸಕಾರಾತ್ಮಕ ಮನೋಭಾವ, ಸಮಯ ಪ್ರಜ್ಞೆ ಬೆಳೆಸಿ ಕೊಳ್ಳಿ. ಹಾಗಾದರೆ ಮಾತ್ರ ಪರಿಪೂರ್ಣ ಜ್ಞಾನ ಪಡೆಯಲು ಸಾಧ್ಯ ಎಂದು ಹೇಳಿದರು.
ವಿಜಯಪುರ ವಿಭಾಗ ಸಹ ಸಂಘಟನಾ ಕಾರ್ಯದರ್ಶಿ ನರೇಶ ಮಾತನಾಡಿ, ಸ್ವಾಮಿ ವಿವೇಕಾನಂದರು ದೇಶ ಕಂಡ ಶ್ರೇಷ್ಠ ಚಿಂತಕ. ದೇಶ ಕಟ್ಟುವ, ಧರ್ಮ ಸಹಿಷ್ಣುತೆ, ಸಾಮರಸ್ಯ, ಶಾಂತಿ ಸೌಹಾರ್ದತೆ, ಬಡವರ ಸೇವೆ, ಶಿಕ್ಷಣ, ಯುವಕರ ಕರ್ತವ್ಯಗಳ ಬಗ್ಗೆ ಅವರ ಚಿಂತನೆಗಳೇ ಪ್ರೇರಣೆ. ಅವರ ತತ್ವ ಆದರ್ಶ ಸ್ವಲ್ಪವಾದರೂ ಇಂದಿನ ಯುವ ಸಮುದಾಯ ಅನುಸರಿಸಿದಲ್ಲಿ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಅವರು 39 ವರ್ಷಗಳ ಕಾಲ ಬದುಕಿದವರು. ಆದರೆ, ಅವರ ಆದರ್ಶಗಳು ಇಂದಿಗೂ ಇಡೀ ವಿಶ್ವಕ್ಕೆ ಮಾದರಿ. ಅವರೊಬ್ಬ ಶ್ರೇಷ್ಠ ಸನ್ಯಾಸಿ. ಯುವಕರ ದಿವ್ಯ ಚೇತನ. ಅವರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಡೆದು, ಬಲಿಷ್ಠ ಭಾರತ ನಿರ್ಮಾಣ ಮಾಡುವ ಕಡೆಗೆ ಯುವ ಸಮುದಾಯ ನಡೆಯಬೇಕು ಎಂದು ಯುವಕರಿಗೆ ಸಲಹೆ ನೀಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕಿರಣ್ ಪವರ್ ಶೆಟ್ಟರ್, ಎಬಿವಿಪಿ ನಗರ ಘಟಕ ಅಧ್ಯಕ್ಷ ಪ್ರೊ. ಎಂ. ಎ. ಪಾಟೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯುವರಾಜ ಜಾಧವ, ಮಲ್ಲು, ಮಲ್ಲಿಕಾರ್ಜುನ ಸೇರಿದಂತೆ ಬಸವೇಶ್ವರ ಇಂಟರ್ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಶಾಂತ ಮುತ್ತಕ್ಕನ್ನವರ ನಿರೂ ಪಿಸಿದರು. ವಿಜಯ ಬಿಂಗೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.