ಹೊಸನಗರ: ನಗದುರಹಿತ ಹಣಕಾಸು ವ್ಯವಹಾರ ಕಲಿಯುವ ಅನಿವಾರ್ಯತೆ ಹಿರಿಯ ನಾಗರಿಕರಿಗೆ ಬಂದಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಮ್ ಹೇಳಿದರು.
ಪಟ್ಟಣದ ನಿವೃತ್ತ ನೌಕರರ ಭವನದಲ್ಲಿ ದಿವ್ಯಶ್ರೀ ಫೌಂಡೇಷನ್, ಜಿಲ್ಲಾ ವಿಕಲಚೇತನ, ಹಿರಿಯ ನಾಗರಿಕ ಸಬಲೀಕರಣ ಹಾಗೂ ವಿವಿಧ ಸಂಘಟನೆ ಗಳ ಆಶ್ರಯದಲ್ಲಿ ಸೋಮವಾರ ಹಿರಿಯ ನಾಗರಿಕರಿಗೆ ನಗದುರಹಿತ ವ್ಯವಹಾರ (ಡಿಜಿಟಲ್ ಪೇಮೆಂಟ್) ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗದು ಹಣದ ಮೇಲೆ ನಂಬಿಕೆ ಇಟ್ಟಿರುವ ಹಿರಿಯ ನಾಗರಿಕರಿಗೆ ಡಿಜಿಟಲ್ ಹಣಕಾಸು ವ್ಯವಹಾರ ಆರಂಭದಲ್ಲಿ ಸ್ವಲ್ಪ ಕಷ್ಟ ಎನಿಸಬಹುದು. ಆದರೆ, ಅದನ್ನು ರೂಢಿ ಮಾಡಿಕೊಳ್ಳುವುದು ಒಳಿತು ಎಂದು ಸಲಹೆ ನೀಡಿದರು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ವ್ಯವಸ್ಥಾಪಕ ಘನಶ್ಯಾಮ ವರ್ಮ, ಸಿಬ್ಬಂದಿ ಗಣೇಶ್, ಹಿರಿಯ ನಾಗರಿಕರಿಗೆ ಡೆಬಿಟ್, ಕ್ರೆಡಿಟ್ ಕಾರ್ಡ್, ಮೊಬೈಲ್ ಆ್ಯಪ್, ಅಂತರ್ಜಾಲದ ಮೂಲಕ ನಗದು ರಹಿತ ಹಣ ವರ್ಗಾವಣೆ ಬಗ್ಗೆ ಮಾಹಿತಿ ನೀಡಿದರು. ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಕೋಡೂರು ರಾಮಚಂದ್ರ ಜೋಯ್ಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ದಿವ್ಯಶ್ರೀ ಫೌಂಡೇಷನ್ ಸಂಚಾಲಕ ಗೋಪಾಲಪ್ಪ, ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಎಸ್.ರವಿಕುಮರ್ ಮತ್ತಿತರರು ಹಾಜರಿದ್ದರು.
ಶಾರದಾ ಗೋಖಲೆ ಪ್ರಾರ್ಥಿಸಿದರು. ತಾಲ್ಲೂಕು ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಅನಂತ ಪದ್ಮನಾಭ ಸ್ವಾಗತಿಸಿದರು. ದಿವ್ಯಶ್ರೀ ಫೌಂಡೇಷನ್ ಕಾರ್ಯದರ್ಶಿ ರಾಕೇಶ್ ಪ್ರಾಸ್ತಾವಿಕ ಮಾತನಾಡಿದರು. ಮಹಾಬಲಪ್ಪ ವಂದಿಸಿದರು.