ಚಿಂಚೋಳಿ: ಅಭಿವೃದ್ಧಿಯಲ್ಲಿ ತಾವು ಪಕ್ಷ ರಾಜಕೀಯ ಮಾಡುವುದಿಲ್ಲ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಪಕ್ಷಗಳ ಸಹಕಾರ ಅಗತ್ಯವಾಗಿದೆ. ರಾಜಕೀಯ ಚುನಾವಣೆಯಲ್ಲಿ ಮಾತ್ರ ಉಳಿದ ಸಮಯದಲ್ಲಿ ಅಭಿವೃದ್ಧಿಗೆ ಮತ್ತು ಜನರ ಸಮಸ್ಯೆ ನಿವಾರಣೆಗೆ ತಮ್ಮ ಸಮಯ ಮೀಸಲಾಗಿರುತ್ತದೆ ಎಂದು ಸಂಸದೀಯ ಕಾರ್ಯದರ್ಶಿ ಡಾ ಉಮೇಶ ಜಾಧವ್ ತಿಳಿಸಿದರು.
ತಾಲ್ಲೂಕಿನ ಅಣವಾರ್ ಗ್ರಾಮದಲ್ಲಿ ಈಚೆಗೆ ನಡೆದ ಸಮಾರಂಭದಲ್ಲಿ ಚಿಂಚೋಳಿ ಅಣವಾರ್ ರಸ್ತೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಚಿಂಚೋಳಿ ಅಣವಾರ್ ರಸ್ತೆಗೆ ₹1 ಕೋಟಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ₹ 10 ಕೋಟಿ, ಬ್ರಿಜ್ ಕಂ ಬ್ಯಾರೇಜಿಗೆ ₹4.5 ಕೋಟಿ ಹಾಗೂ ಅಣವಾರ್ದಿಂದ ಐಪಿ ಹೊಸಳ್ಳಿ ರಸ್ತೆಗೆ ₹ 80 ಲಕ್ಷ, ಕಾಂಕ್ರಿಟ್ ರಸ್ತೆ ₹15 ಲಕ್ಷ ಹೀಗೆ ಒಟ್ಟು ₹16.35 ಕೋಟಿ ಮಂಜೂರು ಮಾಡಿಸಲಾಗಿದೆ ಎಂದರು.
ವೀರೇಂದ್ರ ಪಾಟೀಲರು ಅಣವಾರ್ ಪೋಲಕಪಳ್ಳಿ ಮಧ್ಯೆ ಬಾಂದಾರು ಸೇತುವೆ ನಿರ್ಮಾಣದ ಕನಸು ಕಂಡಿದ್ದರು ಆದರೆ ಇದನ್ನು ನನಸು ಮಾಡಲು ಸಣ್ಣ ನೀರಾವರಿ ಸಚಿವರಾಗಿದ್ದ ಶಿವರಾಜ ತಂಗಡಿ ಅವರಿಗೆ ವಿಧಾನ ಸೌಧದಲ್ಲಿ ಬೆಂಬಲಿಸಿದ್ದಕ್ಕೆ ತಮಗೆ ಇದನ್ನು ಮಂಜೂರು ಮಾಡಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ ಕಾರ್ಯಕ್ರಮಕ್ಕೆ ಆಗಮಿಸಿದ್ದು ನಮಗೆ ಹರ್ಷ ತಂದಿದೆ. ಎಂದು ತಿಳಿಸಿ ಅವರೇ ಸನ್ಮಾನಿಸಿ ಪಕ್ಷ ರಾಜಕೀಯಕ್ಕೆ ತಮ್ಮ ಮಧ್ಯೆ ಅವಕಾಶವಿಲ್ಲ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಬಿ.ಜಿ.ಪಾಟೀಲ ನಾವು ಉಮೇಶ ಜಾಧವ್ ಅವರ ಕ್ರಿಯಾಶೀಲತೆ ಮತ್ತು ಕ್ಷೇತ್ರದಲ್ಲಿ ಜನ ಪರ ಆಗಬೇಕಿರುವ ಕೆಲಸಗಳ ಬಗ್ಗೆ ಕೆಡಿಪಿ ಮತ್ತು ಜಿ.ಪಂ. ಸಭೆಗಳಲ್ಲಿ ಚರ್ಚಿಸುತ್ತಲೇ ಇರುತ್ತಾರೆ. ಅವರು ಸಚಿವರಾದಿಯಾಗಿ ಜಿಲ್ಲಾಧಿಕಾರಿ ಮತ್ತು ಸಿಇಒ ಅವರನ್ನು ಬಿಡುವುದೇ ಇಲ್ಲ ಎಂದರು.
ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಳವಾರ, ಆರ್ ಗಣಮತರಾವ್ ಮಾತನಾಡಿದರು. ತಾ.ಪಂ. ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಕೋಲಿ ಸಮಾಜದ ಅಧ್ಯಕ್ಷ ಲಕ್ಷ್ಮಣ ಆವುಂಟಿ, ಕಾಡಾ ಸದಸ್ಯ ಕೆ.ಎಂ. ಬಾರಿ, ಲೋಕೋಯೋಗಿ ಇಲಾಖೆಯ ಎಇಇ ಎಂ. ಭೀಮರೆಡ್ಡಿ, ಶಾಖಾಧಿಕಾರಿ ನಾಗೇಶ ಮೂರ್ತಿ ಇದ್ದರು. ಗ್ರಾ.ಪಂ. ಉಪಾಧ್ಯಕ್ಷ ಗೋಪಾಲ ಅಧ್ಯಕ್ಷತೆ ವಹಿಸಿದ್ದರು.
ಪ್ರಾಸ್ತಾವಿಕ ಮಾತನಾಡಿ ಸಂಗಯ್ಯ ಸ್ವಾಮಿ ಅಣವಾರ ಸ್ವಾಗತಿಸಿದರು. ಇಸ್ಮಾಯಿಲ್ ನಿರೂಪಿಸಿದರು.ಅಭಿವೃದ್ಧಿ ಅಧಿಕಾರಿ ಬಂಡಪ್ಪ ವಂದಿಸಿದರು. ಸೋಮಶೇಖರ ಮಂಗಲಗಿ, ರಮೇಶ ವಾರ್ಕರ್, ಮಲರೆಡ್ಡಿ, ಸುಭಾಷ ಗಂಗನಪಳ್ಳಿ, ಬಾಬು ಪಾಟೀಲ ವೀರಶೆಟ್ಟಿ ಪಾಟೀಲ, ಬಸವರಾಜ ಹಿತ್ತಲ್, ಭಿಮಶೆಟ್ಟಿ ಹಿತ್ತಲ ಮೊದಲಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.