ಬಸವಕಲ್ಯಾಣ: ಮಹಿಳೆಯರು ಸಶಕ್ತರಾದರೆ ಮಾತ್ರ ದೇಶದೋದ್ಧಾರ ಸಾಧ್ಯ ಎಂದು ಸಾರಿಗೆ ಅಧಿಕಾರಿ ಸಂಜೀವ ವಾಡಿಕರ್ ಹೇಳಿದರು.
ತಾಲ್ಲೂಕಿನ ಫುಲದಾರವಾಡಿಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ ವ್ಯಸನಮುಕ್ತಿ ಮತ್ತು ಆರೋಗ್ಯ ತಪಾಸಣೆ ಶಿಬಿರ ಹಾಗೂ ಮಹಿಳೆಯರಿಗೆ ಉಡುಗೋರೆ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಕ್ರಾಂತಿ ಹಬ್ಬ ಮಹಿಳೆಯರ ಹಬ್ಬವಾಗಿದೆ. ಆದ್ದರಿಂದ ಶಾಲಿನಿ ವಾಡಿಕರ್ ಅವರು ಮಹಿಳೆಯರಿಗೆ ಎಳ್ಳು ಬೆಲ್ಲದ ಜತೆಗೆ ಉಡುಗೋರೆ ನೀಡುವುದಲ್ಲದೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಶಿಬಿರ ಆಯೋಜಿಸಿರುವುದು ಉತ್ತಮ ಕಾರ್ಯವಾಗಿದೆ. ಜತೆಯಲ್ಲಿ ವ್ಯಸನ ಮುಕ್ತಿಯ ಬಗ್ಗೆಯೂ ಉಪನ್ಯಾಸ ಏರ್ಪಡಿಸಿದ್ದು ಇಂಥ ಕಾರ್ಯಕ್ರಮಗಳು ಎಲ್ಲೆಡೆ ನಡೆಯಬೇಕು ಎಂದರು.
ಡಾ.ಬಸವರಾಜ ನಾಟಿಕರ್, ರೂಪಾಲಿ ನಾಟಿಕರ್, ಡಾ.ಅನಿಲ ಆರ್ಯ ಇವರು ಅರೋಗ್ಯ ತಪಾಸಣೆ ನಡೆಸಿದರು. ಜೋಗೆವಾಡಿ, ಮದರವಾಡಿ, ಫುಲದಾರವಾಡಿ, ನವಚಂದವಾಡಿ ಗ್ರಾಮಗಳ 215 ಜನರಿಗೆ ಚಿಕಿತ್ಸೆ ನೀಡಲಾಯಿತು.
ಕೋಲಿ ಸಮಾಜದ ಹಿರಿಯ ಮುಖಂಡ ವಾಲ್ಮೀಕಿ ಖನಕೋರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕಾಳಿದಾಸ ವಾಡಿಕರ್, ತಾಲ್ಲೂಕು ಪಂಚಾಯಿತಿ ಸದಸ್ಯ ಲಹು ಜೋಗೆ, ಎಪಿಎಂಸಿ ಸದಸ್ಯ ಸಂತೋಷ ಜಾಧವ, ಮಹೇಶ ಪಾಟೀಲ, ರಾಜಕುಮಾರ ಹಿರಲೆ, ರಾಮಣ್ಣ ಮಂಠಾಳೆ ಪಾಲ್ಗೊಂಡಿದ್ದರು. ರೇವಣಸಿದ್ದಪ್ಪ ಸಂಗೀತ ಪ್ರಸ್ತುತಪಡಿಸಿದರು. ಹಬ್ಬದ ಅಂಗವಾಗಿ ಮಹಿಳೆಯರಿಗೆ ಬಳೆ ಉಡಿಸಿ ಪಾತ್ರೆಗಳನ್ನು ಉಡುಗೊರೆಯಾಗಿ ನೀಡಲಾಯಿತು.