ಕಲಬುರ್ಗಿ: ‘ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ವೀಕ್ಷಿಸಿ ಕಲೆಯನ್ನು ಪ್ರೋತ್ಸಾಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ಕಲಬುರ್ಗಿ ರಂಗಾಯಣ ವತಿಯಿಂದ ನಗರದ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಜ.21ರ ವರೆಗೆ ಹಮ್ಮಿಕೊಂಡಿರುವ ಬಹುರೂಪಿ ಅಂತರರಾಷ್ಟ್ರೀಯ ಬಹುಭಾಷಾ ನಾಟಕೋತ್ಸವಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ರಂಗಾಯಣದ ವತಿಯಿಂದ ಅಂತರರಾಷ್ಟ್ರೀಯ ನಾಟಕೋತ್ಸವ ಹಮ್ಮಿಕೊಂಡಿರುವುದು ಸ್ವಾಗತಾರ್ಹ. ಆದರೆ, ಸಾರ್ವಜನಿಕರು ಹೆಚ್ಚು ಪಾಲ್ಗೊಳ್ಳದೆ ಇರುವುದರಿಂದ ಪ್ರಚಾರದ ಕೊರತೆ ಎದ್ದು ಕಾಣುತ್ತಿದೆ’ ಎಂದು ಹೇಳಿದರು.
ಹಿರಿಯ ನಾಟಕಕಾರ ಎಲ್.ಬಿ.ಕೆ.ಆಲ್ದಾಳ ಮಾತನಾಡಿ, ‘ಭೂಮಿ ಸೃಷ್ಟಿಯಾದ ದಿನವೇ ರಂಗಭೂಮಿ ಸೃಷ್ಟಿಯಾಗಿದೆ. ‘ಆಡು ನಾಟಕ, ಬೆಳೆಸು ಮಸ್ತಕ’ ಎನ್ನುವಂತೆ ನಾಟಕಗಳನ್ನು ಆಡಬೇಕು. ನೋಡಬೇಕು. ಕಲಿ ಯಬೇಕು’ ಎಂದು ಸಲಹೆ ನೀಡಿದರು.
ಶಾಸಕ ಬಿ.ಆರ್.ಪಾಟೀಲ ಮಾತನಾಡಿ, ‘ಈ ಪ್ರದೇಶದ ರಂಗಾಸಕ್ತರು ಕಲಬುರ್ಗಿ ರಂಗಾಯಣವನ್ನು ಗಟ್ಟಿಗೊಳಿಸುವ ಕಾರ್ಯ ಮಾಡಬೇಕು. ಆ ಮೂಲಕ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸಬೇಕು’ ಎಂದು ಅವರು ಹೇಳಿದರು.
ರಂಗ ಸಮಾಜದ ಸದಸ್ಯೆ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿ, ‘ಸಂಬಂಧಗಳನ್ನು ಬೆಸೆಯುವ ಶಕ್ತಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕಗಳಿಗೆ ಇದೆ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್ಕೆಆರ್ಡಿಬಿ) ವತಿಯಿಂದ ಜಿಲ್ಲೆಯಲ್ಲಿ 150 ಆಸನಗಳ ರಂಗಮಂದಿರವನ್ನು ನಿರ್ಮಿಸಿಕೊಡಬೇಕು’ ಮಂಡಳಿ ಅಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ ಮನವಿ ಮಾಡಿದರು.
ಹಿರಿಯ ರಂಗಕರ್ಮಿ ಪ್ರಭಾಕರ ಸಾಥಖೇಡ ಮಾತನಾಡಿದರು. ರಂಗಾಯಣ ಪ್ರಭಾರ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ, ಬಹುರೂಪಿ ನಾಟಕೋತ್ಸವ ಸಂಚಾಲಕ ಸಂದೀಪ ಬಿ., ಕಲಾವಿದ ಸಂತೋಷ ಕುಸನೂರು ಇದ್ದರು.
ರಂಗಾಯಣ ಪ್ರಭಾರ ನಿರ್ದೇಶಕ ಕೆ.ಎಚ್.ಚನ್ನೂರ ಸ್ವಾಗತಿಸಿದರು. ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ನಿರೂಪಿಸಿದರು.