ಆನೇಕಲ್: ‘ಆಂತರಿಕ ಶಾಂತಿಯಿಲ್ಲದೇ ಬಾಹ್ಯ ಶಾಂತಿ ತರಲು ಸಾಧ್ಯವಿಲ್ಲ. ಆಂತರಿಕ ಶಾಂತಿಗೆ ಯೋಗ ದಿವ್ಯೌಷಧವಾಗಿದೆ. ಹಾಗಾಗಿ ಯೋಗದ ಮೂಲಕ ಜನರು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು’ ಎಂದು ಆರ್ಟ್ ಆಫ್ ಲಿವಿಂಗ್ನ ರವಿಶಂಕರ್ ಗುರೂಜಿ ನುಡಿದರು.
ತಾಲ್ಲೂಕಿನ ಜಿಗಣಿ ಸಮೀಪದ ಪ್ರಶಾಂತಿ ಕುಟೀರದ ಎಸ್–ವ್ಯಾಸ ಯೋಗ ವಿಶ್ವವಿದ್ಯಾಲಯದಲ್ಲಿ ‘ಶಾಂತಿ ಯೋಗ ಪೀಠಂ’ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಯೋಗವು ಪ್ರಾಚೀನ ಜ್ಞಾನ ಹಾಗೂ ಆಧುನಿಕ ವೈಜ್ಞಾನಿಕ ಸಂಶೋಧನೆಯನ್ನು ಸಮನ್ವಯ ಮಾಡಿಕೊಂಡಿದೆ. ಯೋಗಕ್ಕೆ ಪ್ರಪಂಚವನ್ನು ಒಗ್ಗೂಡಿಸುವ ಶಕ್ತಿಯಿದೆ. ಅಲ್ಲದೆ ಯೋಗಾಭ್ಯಾಸದಿಂದ ಧನಾತ್ಮಕ ಚಿಂತನೆ ಮತ್ತು ಆನಂದಾನುಭವವು ವ್ಯಕ್ತಿಯಲ್ಲಿ ಬೆಳೆಯಲಿದೆ ಎಂದು ಅವರು ಅಭಿಪ್ರಾಯಿಸಿದರು.
ಯೋಗ ವಿಶ್ವಮಾನ್ಯ ಆಗುವಂತೆ ಮಾಡುವಲ್ಲಿ ಎಸ್–ವ್ಯಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಚ್.ಆರ್.ನಾಗೇಂದ್ರ ಅವರ ಅವಿರತ ಶ್ರಮಿವಿದೆ. ಜ್ಞಾನ, ಕರ್ಮ, ಭಕ್ತಿ ಹಾಗೂ ರಾಜ ಯೋಗಗಳನ್ನು ಸಮನ್ವಯ ಮಾಡಿ ಯೋಗ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡಿಸಲಾಗುತ್ತಿದೆ ಅವರು ಶ್ಲಾಘಿಸಿದರು.
‘ಆರ್ಟ್ ಆಫ್ ಲಿವಿಂಗ್’ ನಲ್ಲಿ ಬಹಳ ಹಿಂದೆ ನಾಲ್ಕು ಯೋಗಗಳ ಪ್ರಯೋಗವನ್ನು ಮಾಡಿ ವ್ಯಕ್ತಿಯ ಅಸಾಧಾರಣ ಶಕ್ತಿ ಸಾಮರ್ಥ್ಯಗಳನ್ನು ಚಾಲನೆಗೊಳಿಸಿ ನೋಡಿದ ಅನುಭವ ನಮ್ಮಲ್ಲಿದೆ.
ಇಂತಹ ದಿವ್ಯಾನುಭವವನ್ನು ಸ್ವಾಮಿ ವಿವೇಕಾನಂದರು ಮತ್ತು ಅರವಿಂದರು ಪಡೆದಿದ್ದರು. ಎಸ್–ವ್ಯಾಸದಲ್ಲಿ ಸಹ ಇಂತಹ ಪ್ರಯೋಗಗಳು ವೈಜ್ಞಾನಿಕವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಚ್.ಆರ್.ನಾಗೇಂದ್ರ ಮಾತನಾಡಿ, ಆಧುನಿಕ ಸಂಸ್ಕೃತಿಯಲ್ಲಿ ನಿರಂತರವಾಗಿ ತಂತ್ರಜ್ಞಾನದ ಸ್ಫೋಟವಾಗುತ್ತಿವೆ ಎಂದರು.
ತತ್ವಶಾಸ್ತ್ರ ವಿದ್ವಾಂಸಕರಾದ ಪ್ರೊ.ಎ.ಎಸ್. ಸತ್ಯನಾರಾಯಣ್ ಶಾಸ್ತ್ರೀ ಅವರ ಕೃತಿಯೊಂದನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಪ ಕುಲಪತಿ ಪ್ರೊ.ರಾಮಚಂದ್ರ ಭಟ್, ಉಪಕುಲಾಧಿಪತಿ ಪ್ರೊ.ಕೆ.ಸುಬ್ರಹ್ಮಣ್ಯ, ರಿಜಿಸ್ಟ್ರಾರ್ ಸಂಜೀವ್ ಪಾತ್ರ ಸೇರಿದಂತೆ ಮತ್ತಿತರರು ಹಾಜರಿದ್ದರು.