ವಿಜಯಪುರ: ‘ಒಂದು ಕ್ವಿಂಟಲ್ ತೊಗರಿ ಬೆಳೆಯುವ ವೆಚ್ಚ ವೈಜ್ಞಾನಿಕವಾಗಿ ₹ 5,500 ರಷ್ಟಾಗಲಿದ್ದು, ರಾಜ್ಯ ಸರ್ಕಾರ ಇದೇ ಬೆಲೆಯಡಿ ರೈತರಿಂದ ಖರೀದಿ ಮಾಡುತ್ತಿದೆ’ ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪ್ರಕಾಶ್ ಕಮ್ಮರಡಿ ತಿಳಿಸಿದರು.
‘ತೋಟಗಾರಿಕೆಯ 11, ಕೃಷಿಯ 14 ಬೆಳೆ ವಿಚಾರದಲ್ಲಿ ಬೆಳೆಯುವ ವೆಚ್ಚ, ಮಾರುಕಟ್ಟೆ ಬೆಲೆ ಸೇರಿದಂತೆ ಎಲ್ಲ ಅಂಶಗಳನ್ನೊಳಗೊಂಡ ಸಮಗ್ರ ವಿಶ್ಲೇಷಣಾ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕೈಪಿಡಿ ರೂಪದಲ್ಲಿ ಈಗಾಗಲೇ ಸಲ್ಲಿಸಲಾಗಿದೆ’ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಒಣದ್ರಾಕ್ಷಿ ಬೆಲೆ ಕುಸಿತಗೊಂಡಿದೆ. ಇದಕ್ಕೆ ಬೆಂಬಲ ಬೆಲೆ ಘೋಷಿಸಲು ಸಾಧ್ಯವಿಲ್ಲ. ಇನ್ನಷ್ಟು ಕುಸಿತಗೊಂಡರೆ, ಅಡಿಕೆ ಖರೀದಿಗೆ ಮಧ್ಯ ಪ್ರವೇಶಿಸಿದಂತೆ, ಒಣ ದ್ರಾಕ್ಷಿಯನ್ನೂ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.