ಮುಂಬೈ : ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಟಾಟಾ ಸನ್ಸ್ ವಿರುದ್ಧ ಸಲ್ಲಿಸಿದ್ದ ನ್ಯಾಯಾಂಗ ನಿಂದನಾ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಯು (ಎನ್ಸಿಎಲ್ಟಿ) ವಜಾಗೊಳಿಸಿದೆ.
ಟಾಟಾ ಸನ್ಸ್ನ ನಿರ್ದೇಶಕ ಮಂಡಳಿಯಿಂದ ಮಿಸ್ತ್ರಿ ಅವರನ್ನು ಹೊರ ಹಾಕುವುದಕ್ಕೆ ಸಂಬಂಧಿಸಿದಂತೆ ‘ಎನ್ಸಿಎಲ್ಟಿ’ ನೀಡಿದ್ದ ನಿರ್ದೇಶನವನ್ನು ಉಲ್ಲಂಘಿಸಲಾಗಿದೆ ಎಂದು ಮಿಸ್ತ್ರಿ ಕುಟುಂಬಕ್ಕೆ ಸೇರಿದ ಎರಡು ಸಂಸ್ಥೆಗಳು ದೂರು ಸಲ್ಲಿಸಿದ್ದವು.
ಮಿಸ್ತ್ರಿ ಅವರನ್ನು ಟಾಟಾ ಸನ್ಸ್ನ ನಿರ್ದೇಶಕ ಮಂಡಳಿಯಿಂದಲೂ ಹೊರಹಾಕಲು ಫೆಬ್ರುವರಿ 6ರಂದು ಕರೆದಿರುವ ಸರ್ವ ಸದಸ್ಯರ ವಿಶೇಷ ಸಭೆ ಕುರಿತು ಮೂರು ದಿನಗಳಲ್ಲಿ ಪ್ರಮಾಣ ಪತ್ರ ಸಲ್ಲಿಸಲು ನ್ಯಾಯಮಂಡಳಿಯು ಮಿಸ್ತ್ರಿ ಅವರಿಗೆ ಸೇರಿದ ಸಂಸ್ಥೆಗಳಿಗೆ ಅನುಮತಿ ನೀಡಿದೆ. ಇದಕ್ಕೆ ಪ್ರತಿಯಾಗಿ ತನ್ನ ನಿಲುವು ತಿಳಿಸಲು ಟಾಟಾ ಸನ್ಸ್ಗೂ ಅವಕಾಶ ನೀಡಲಾಗಿದೆ. ಟಾಟಾ ಸನ್ಸ್ ಕೈಗೊಂಡ ನಿರ್ಧಾರವು ನ್ಯಾಯಾಂಗ ನಿಂದನೆಯಾಗಲಾರದು. ಹೀಗಾಗಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಎನ್ಸಿಎಲ್ಟಿಯ ವಿಭಾಗೀಯ ಪೀಠ ತಿಳಿಸಿದೆ.
ಫೆಬ್ರುವರಿ 6ರಂದು ಕರೆದಿರುವ ಸರ್ವ ಸದಸ್ಯರ ವಿಶೇಷ ಸಭೆಗೆ ತಡೆಯಾಜ್ಞೆ ನೀಡಬೇಕು ಎಂದೂ ಸೈರಸ್ ಇನ್ವೆಸ್ಟಮೆಂಟ್ಸ್ ಲಿಮಿಟೆಡ್ ಮತ್ತು ಸ್ಟರ್ಲಿಂಗ್ ಇನ್ವೆಸ್ಟ್ಮೆಂಟ್ ಸಂಸ್ಥೆಗಳು ಮನವಿ ಮಾಡಿಕೊಂಡಿದ್ದವು.